ಬೆಂಗಳೂರು: ಬಸ್ಸಿನಡಿಗೆ ಸಿಲುಕಿದ್ದ ವ್ಯಕ್ತಿ ದೇಹವನ್ನು ಚಾಲಕ 70 ಕಿ.ಮೀ ಎಳೆದು ತಂದಿದ್ದ ಘಟನೆ ಬೆಂಗಳೂರಿನ ಶಾಂತಿನಗರದಲ್ಲಿ ನಡೆದಿದ್ದು, ಚಾಲಕನನ್ನ ಕೃತ್ಯ ನಡೆದ ಸ್ಥಳಕ್ಕೆ ಪೊಲೀಸರು ಕರೆದೊಯ್ಯಲು ಸಿದ್ಧತೆ ನಡೆಸಿದ್ದಾರೆ.
ಬಸ್ ಚಾಲಕ ಮೊಯಿದ್ದೀನ್ ಎಂಬಾತನಿಂದ ಈ ಅಪಘಾತ ನಡೆದಿದೆ. ಕೆಎಸ್ಆರ್ಟಿಸಿ ಬಸ್ ತಮಿಳುನಾಡಿನಿಂದ ಬೆಂಗಳೂರಿಗೆ ಬರುತ್ತಿರುವಾಗ ಅಪರಿಚಿತ ವ್ಯಕ್ತಿಗೆ ಬಸ್ ಡಿಕ್ಕಿ ಹೊಡೆದಿದೆ. ನಂತರ ಬಸ್ ನಡಿ ಸಿಲುಕಿದ ವ್ಯಕ್ತಿಯ ಶವವನ್ನು ಶಾಂತಿನಗರ ಡಿಪೋವರೆಗೆ ಎಳೆದುಕೊಂಡು ಹೋಗಿದೆ.
ಫೆಬ್ರವರಿ 4ರ ಬೆಳಗ್ಗೆ ಈ ಘಟನೆ ನಡೆದಿದ್ದು, ಶಾಂತಿನಗರದ ಕೆಎಸ್ಆರ್ ಟಿಸಿ ಬಸ್ ಡಿಪೋದಲ್ಲಿ ಮೃತ ದೇಹ ಪತ್ತೆಯಾಗಿದೆ. ನಂತರ ಸಿಸಿಟಿವಿ ಮೂಲಕ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಚಾಲಕನನ್ನು ಪತ್ತೆ ಮಾಡಿದ್ದಾರೆ.
ನಡೆದಿದ್ದೇನು?: ಬಸ್ ತಮಿಳುನಾಡು, ಮೈಸೂರು, ಮಂಡ್ಯ ಮಾರ್ಗವಾಗಿ ಬೆಂಗಳೂರಿಗೆ ಬಂದಿದ್ದು, ಚಾಲಕನಿಗೆ ಅಘಘಾತವಾಗಿರುವುದರ ಬಗ್ಗೆ ತಿಳಿದಿರಲಿಲ್ಲ. ಶಾಂತಿನಗರ ಡಿಪೋದಲ್ಲಿ ಬಸ್ ನೋಡಿದಾಗ ಚಾಲಕನಿಗೆ ಅಪಘಾತ ಆಗಿರೋದು ಗೊತ್ತಾಗಿದೆ. ಚಾಲಕ ಹೆಣವನ್ನು ಕಂಡು ಗಾಬರಿಗೊಂಡಿದ್ದು, ಬೇರೊಂದು ಬಸ್ಗೆ ಹೆಣವನ್ನು ಹಾಕಿ ಹೋಗಿದ್ದಾನೆ. ಬೆಳಗ್ಗೆ ಒಂಭತ್ತು ಗಂಟೆಗೆ ಹೆಣ ಬಸ್ನಲ್ಲಿ ಇರೋದು ಪತ್ತೆಯಾಗಿದ್ದು, ಶಾಂತಿನಗರ ಡಿಪೋ ಸಿಸಿಟಿವಿ ಪರಿಶೀಲಿಸಿದಾಗ ಮೊಯಿದ್ದೀನಿ ಮಾಡಿದ ಕುತಂತ್ರ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ವಿಲ್ಸನ್ ಗಾರ್ಡನ್ ಪೊಲೀಸರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಸದ್ಯ ಮೋಯಿದ್ದೀನ್ ಪೊಲೀಸರ ಕಸ್ಟಡಿಯಲ್ಲಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ. ತನಿಖೆ ವೇಳೆ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟೇ ಅಲ್ಲದೇ ಚನ್ನಪಟ್ಟಣದಿಂದ ವ್ಯಕ್ತಿ ದೇಹ ಎಳೆದು ತಂದಿರುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದಾನೆ.
ಸದ್ಯ ವಿಲ್ಸನ್ ಗಾರ್ಡನ್ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.