ಬಾಗಲಕೋಟೆ: ಶಿವಮೊಗ್ಗದಲ್ಲಿ ಆಗಲಾರದ್ದಕ್ಕೆ ಇಲ್ಲಿ ಬರ್ತಾರೆ ಅಂದ್ರೆ ಬಿಎಸ್ವೈ ಅವರಿಗೆ ಅಥವಾ ಕಾರ್ಯಕರ್ತರಿಗೆ ಭಯ ಆತಂಕ ಇರಬಹುದೇನೋ ಅಬಕಾರಿ ಸಚಿವ ಆರ್.ಬಿ ತಿಮ್ಮಾಪುರ ಟಾಂಗ್ ನೀಡಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಉತ್ತರ ಕರ್ನಾಟಕ ಭಾಗದಿಂದ ಸ್ಪರ್ಧಿಸಲಿದ್ದಾರೆ ಎನ್ನುವ ವಿಚಾರಕ್ಕೆ ಬಾಗಲಕೋಟೆ ರೈಲು ನಿಲ್ದಾಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ತಿಮ್ಮಾಪುರ ಅವರು, ಯಾರೊ ಒಬ್ಬರು ಬಂದು ಸ್ಪರ್ಧಿಸುತ್ತಾರೆ ಅಂದಾಕ್ಷಣ ಇಲ್ಲಿ ಬದಲಾವಣೆ ಆಗೋದಿಲ್ಲ. ಶಾ ಬಂದು ಬಿಡ್ತಾರೆ, ಶಾ ಬಂದು ಬಿಡ್ತಾರೆ ಅಂತಾರಲ್ಲ ಬಂದು ಏನ್ ಮಾಡ್ತಾರೆ ಎಂದು ಪ್ರಶ್ನಿಸಿದ್ರು.
ಸಿಎಂ ಸಿದ್ದರಾಮಯ್ಯ ಬಾಗಲಕೋಟೆಯಿಂದ ಸ್ಪರ್ಧಿಸಲಿ ಎಂದು ನಾವೆಲ್ಲ ಮನವೊಲಿಸುತ್ತಿದ್ದೇವೆ. ಅವರು ಜಿಲ್ಲೆಯ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಿದರೂ ಅವರನ್ನು ಗೆಲ್ಲಿಸುತ್ತೇವೆ. ಗೆದ್ದೆ ಗೆಲ್ತಾರೆ ಎಂದು ತಿಳಿಸಿದರು.
ಅಬಕಾರಿ ಇಲಾಖೆಯ ಬಗ್ಗೆ ಮಾತನಾಡಿ ಅವರು, ಕಳ್ಳಬಟ್ಟಿ ಸರಾಯಿಯನ್ನು ಬಂದ್ ಮಾಡಬೆಕಾಗುತ್ತದೆ. ಅದರ ಜೊತೆಗೆ ನಕಲಿ ಮದ್ಯ ಹಾಗೂ ಅದರಲ್ಲೂ ವಿಶೇಷವಾಗಿ ಡ್ರಗ್ ಮಾಫಿಯಾದಿಂದ ಮಕ್ಕಳು ಹಾಳಾಗುತ್ತಿದ್ದಾರೆ. ಆದ್ದರಿಂದ ಅದಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಈಗಾಗಲೇ ಅದನ್ನು ತಡೆಯಲು ನಾವು ಅಧಿಕಾರಿಗಳ ವಿಶೇಷ ವಿಂಗ್ ತಯಾರಿಸಿ ನಿರ್ದೇಶನ ನೀಡಿದ್ದೇವೆ. ಅವರು ಅವರ ಕೆಲಸವನ್ನು ಪ್ರಾರಂಭಿಸುತ್ತಾರೆ. ಅಷ್ಟೆ ಅಲ್ಲದೆ ಯಾವುದೇ ಹೊಸ ಬಾರ್ಗಳಿಗೆ, ಲೈಸೆನ್ಸ್ ನೀಡುವ ಬಗ್ಗೆ ಪ್ರಸ್ತಾವನೆ ಇಲ್ಲ ಎಂದು ತಿಳಿಸಿದರು.
ಕೊನೆಯದಾಗಿ ಸನ್ಮಾನ್ಯ ಮುಖ್ಯ ಮಂತ್ರಿಗಳು ಅವರು ನನ್ನನ್ನು ಮಂತ್ರಿಯನ್ನಾಗಿ ಮಾಡಿದ್ದಾರೆ. ರಾಜ್ಯದ ಜನತೆಯ ಸೇವೆಯನ್ನು ಮಾಡಲು ಅವಕಾಶ ಮಾಡಿಕೊಟ್ಟ ಮುಖ್ಯಮಂತ್ರಿಗಳಿಗೆ ನಾನು ವಿಶೇಷವಾಗಿ ಅಭಿನಂದನೆ ಹೇಳುತ್ತೇನೆ. ಅವರ ಆಶೋತ್ತರಗಳು ಈ ರಾಜ್ಯದ ಜನತೆಗೆ ಯಾವ ಭರವಸೆಯನ್ನು ನೀಡಿದ್ದಾರೆ ಯಾವ ರೀತಿಯ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೋ ಅದರ ಜೊತೆ ಜೊತೆಯಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.