ಉತ್ತರ ಕನ್ನಡ: ಮದುವೆಗೆ ಹೊರಟ್ಟಿದ್ದವರ ಟೆಂಪೋ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಜಿಲ್ಲೆಯ ಭಟ್ಕಳ ತಾಲೂಕಿನ ಅನಂತವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಘಟನೆಯಲ್ಲಿ ವಧು ಸೇರಿದಂತೆ 6 ಜನರು ಸಾವನ್ನಪ್ಪಿದ್ದು, 22 ಜನ ಗಾಯಗೊಂಡಿದ್ದಾರೆ.
ಇಂದು ಹಸೆಮಣೆ ಏರಬೇಕಿದ್ದ ವಧು ದಿವ್ಯಾ ಕುರ್ಡೇಕರ್ ಮೃತಪಟ್ಟಿದ್ದಾರೆ. ಖಾಸಗಿ ಬಸ್ ಚಾಲಕ ಉಮೇಶ್ ವಾಲ್ಮಿಕಿ (35), ಟೆಂಪೋ ಚಾಲಕ ನಾಗಪ್ಪ ಗಣಿಗಾರ್(46), ಟೆಂಪೋದಲ್ಲಿದ್ದ ಪಾಲಾಕ್ಷಿ (42), ಬೇಬಿ (38) ಹಾಗೂ ಸುಬ್ರಹ್ಮಣ್ಯ (15) ಮೃತ ದುರ್ದೈವಿಗಳು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪೂಜಾ ಸೇಠ್ ಎಂಬವರು ಸಾವನ್ನಪ್ಪಿದ್ದಾರೆ.
ದಾವಣಗೆರೆ ಮೂಲದವರಾದ ದಿವ್ಯಾ ಅವರ ಮದುವೆ ಹರೀಶ್ ಎಂಬವರ ಜೊತೆ ಇಂದು ಧರ್ಮಸ್ಥಳದಲ್ಲಿ ನಡೆಯಬೇಕಿತ್ತು. ಶಿರಸಿ ತಾಲೂಕಿನ ದಾಸನಕೊಪ್ಪ ಗ್ರಾಮದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟೆಂಪೋ ಹಾಗೂ ಮಂಗಳೂರಿನಿಂದ ಹೊನ್ನಾವರ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ನಡುವೆ ಈ ಅಪಘಾತ ಸಂಭವಿಸಿದೆ.
ಗಂಭೀರವಾಗಿ ಗಾಯಗೊಂಡವರನ್ನ ಉಡುಪಿ ಜಿಲ್ಲೆಯ ಮಣಿಪಾಲ್ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಕೆಲವರಿಗೆ ಭಟ್ಕಳ ತಾಲೂಕು ಆಸ್ಪತ್ರೆ ಹಾಗೂ ಮುರಡೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.