ದಾವಣಗೆರೆ: ಆಸ್ತಿ ವಿಚಾರವಾಗಿ ತಮ್ಮನೇ ತನ್ನ ಸ್ವಂತ ಅಕ್ಕನನ್ನು ಕೊಲೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಬೊಮ್ಮನಹಳ್ಳಿ ತಾಂಡಾದಲ್ಲಿ ನಡೆದಿದೆ.
ಶಾಂತಾಬಾಯಿ (50) ಸಹೋದರನಿಂದ ಕೊಲೆಯಾದ ದುರ್ದೈವಿ. ಗಣೇಶ್ ನಾಯಕ್ ಎಂಬಾತನೇ ತನ್ನ ಅಕ್ಕಳಾದ ಶಾಂತಾಬಾಯಿ ಎಂಬವರನ್ನು ಎರಡು ಎಕರೆ ಜಮೀನು ವಿಚಾರವಾಗಿ ಕೊಲೆ ಮಾಡಿದ್ದಾನೆ.
ಏನಿದು ಪ್ರಕರಣ?: ಗಣೇಶ್ ಮೂರು ದಿನಗಳ ಹಿಂದೆ ಅದೇ ಗ್ರಾಮದಲ್ಲಿರುವ ತನ್ನ ಅಕ್ಕ ಶಾಂತಾಬಾಯಿ ಅವರ ಮನೆಗೆ ಕುಡಿದು ಹೋಗಿದ್ದಾನೆ. ತಾನು ತಂದೆಯಿಂದ ಬಂದ ಎರಡು ಎಕರೆ ಜಮೀನು ಮಾರುತ್ತಿದ್ದು, ಕಾಗದಕ್ಕೆ ಸಹಿ ಹಾಕುವಂತೆ ಪೀಡಿಸಿದ್ದಾನೆ. ಆದರೆ ಶಾಂತಾಬಾಯಿ ನಿನ್ನ ಹೆಂಡತಿ ಬಂದು ಹೇಳಿದರೆ ಮಾತ್ರ ಸಹಿ ಹಾಕುವುದಾಗಿ ತಿಳಿಸಿದ್ದಾರೆ. ಇದರಿಂದ ಕುಪಿತನಾದ ಗಣೇಶ್ ಕಬ್ಬಿಣದ ರಾಡ್ನಿಂದ ಅಕ್ಕನ ತಲೆಗೆ ಹೊಡೆದಿದ್ದಾನೆ.
ತಲೆಗೆ ಗಂಭೀರವಾಗಿ ಗಾಯಗೊಂಡ ಶಾಂತಾಬಾಯಿರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಶಾಂತಾಬಾಯಿ ಮೃತಪಟ್ಟಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಗಣೇಶ್ ನಾಯಕ್ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.