ಹುಬ್ಬಳ್ಳಿ: ಸಹೋದರ ಸಂಬಂಧಿಗಳಾಗಬೇಕಿದ್ದ ಯುವಕ ಯುವತಿ ಪ್ರೀತಿಸಿ ಮನೆಬಿಟ್ಟು ಓಡಿಹೋದ ಘಟನೆ ಹುಬ್ಬಳ್ಳಿಯ ರಾಮನಗರದಲ್ಲಿ ನಡೆದಿದ್ದು, ಪೋಷಕರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಪಕ್ಕಿರೇಶ ಮತ್ತು ಗೀತಾ ಮನೆಬಿಟ್ಟು ಹೋಗಿರುವ ಜೋಡಿಯಾಗಿದ್ದಾರೆ. ಇವರಿಬ್ಬರು ವರಸೆಯಲ್ಲಿ ಸಹೋದರ ಸಂಬಂಧಿಗಳು. ಕಾರ್ಖಾನೆಯಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಗೀತಾ ಹಾಗೂ ಡ್ರೈವರ್ ಕೆಲಸ ಮಾಡುವ ಪಕ್ಕಿರೇಶ ಇಬ್ಬರೂ ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಗೀತಾ ತಂದೆ ಮತ್ತು ಪಕ್ಕಿರೇಶ ತಂದೆ ಸಹೋದರ ಸಂಬಂಧಿಗಳಾಗಿದ್ದರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು.
ಎಪ್ರಿಲ್ 4ರಂದು ಮುಂಡಗೋಡ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಬೇರೊಬ್ಬ ಯುವಕನ ಜೊತೆ ಗೀತಾ ಮದುವೆ ನಿಶ್ಚಯವಾಗಿತ್ತು. ಆದ್ರೆ ಮಾರ್ಚ್ 27ರಂದೇ ಗೀತಾ ಮನೆ ಬಿಟ್ಟು ಪಕ್ಕಿರೇಶ ಜೊತೆ ಓಡಿ ಹೋಗಿದ್ದಾಳೆ.
ಅಲ್ಲದೆ ಮನೆಬಿಟ್ಟು ಹೋಗುವಾಗ ಗೀತಾ ಮದುವೆಗೆಂದು ತೆಗೆದಿಟ್ಟಿದ್ದ 70 ಸಾವಿರ ರೂಪಾಯಿ ನಗದು, 40 ಗ್ರಾಂ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ. ಈ ಸಂಬಂಧ ಗೀತಾ ಪೋಷಕರು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.