ಶ್ರೀನಗರ: ಸೇನಾ ಸಿಬ್ಬಂದಿ ಮೇಲಿನ ಕಲ್ಲು ತೂರಾಟವನ್ನು ತಡೆಯುವುದಕ್ಕಾಗಿ ಕಲ್ಲು ತೂರಿದ ಯುವಕನೊಬ್ಬನನ್ನು ಜೀಪ್ ಕಟ್ಟಿ ಸಾರ್ವಜನಿಕವಾಗಿ ಮೆರವಣಿಗೆ ಮಾಡಿದ್ದ ಸೇನಾ ಅಧಿಕಾರಿ ಮೇಜರ್ ಲೀತುಲ್ ಗೊಗೊಯ್ ಅವರಿಗೆ ಭಾರತೀಯ ಸೇನೆಯ ಜನರಲ್ ಬಿಪಿನ್ ರಾವತ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಆಂತರಿಕ ಬಂಡಾಯ ಧಮನ ಕಾರ್ಯಾಚರಣೆಯಲ್ಲಿನ ಅವರ ಸತತ ಪ್ರಯತ್ನಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಸೇನೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಏನಿದು ಪ್ರಕರಣ?
ಏಪ್ರಿಲ್ 9ರಂದು ಕಾಶ್ಮೀರದಲ್ಲಿ ಸೈನಿಕರ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸುತ್ತಿದ್ದರು. ಈ ವೇಳೆ ಪ್ರತಿಭಟನೆಯನ್ನು ತಡೆಯುವ ಸಲುವಾಗಿ ಕಲ್ಲು ತೂರಾಟ ನಡೆಸುವವರನ್ನೇ ಭಾರತೀಯ ಸೈನಿಕರು ಜೀಪ್ ಗೆ ಬಿಗಿದು ಚಾಲನೆ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿತ್ತು.
ಈ ಕುರಿತು ಸೇನೆ ತನಿಖೆಗೆ ಆದೇಶಿಸಿತ್ತು. ಯುವಕನನ್ನು ಜೀಪ್ ಗೆ ಕಟ್ಟಿ ಮೆರವಣಿಗೆ ಮಾಡಿದ್ದ ಸೇನಾ ಮೇಜರ್ಲೀತುಲ್ ಗೊಗೊಯ್ ಅವರ ವಿರುದ್ಧ ಪೊಲೀಸರು ಎಫ್ಐಆರ್ ಸಹ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೇನಾ ಕೋರ್ಟ್ ಕ್ಲೀನ್ ಚಿಟ್ ನೀಡಿ ಲೀತುಲ್ ಗೊಗೊಯ್ ಅವರನ್ನು ಶ್ಲಾಘಿಸಿತ್ತು.