ಬಳ್ಳಾರಿ: ಕಾಂಗ್ರೆಸ್ (Congress) ನಾಯಕರಿಗಿಂತ ಹೆಚ್ಚು, ಬಿಜೆಪಿ (BJP) ನಾಯಕರೇ ನನಗೆ ತೊಂದರೆ ಕೊಡುತ್ತಿದ್ದಾರೆ. ನನ್ನ ರಾಜಕೀಯ ಜೀವನ ಮುಂದೆ ಹೇಗಿರುತ್ತೆ, ಅದು ನನಗೆ ಗೊತಿಲ್ಲ. ನಾನು ಬೆಳೆಸಿದ ಪಕ್ಷದವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ. ಕಾಂಗ್ರೆಸ್ನವರು ಕಷ್ಟ ಕೊಟ್ಟಿದ್ದಾರೆ. ಆದ್ರೆ ಬಿಜೆಪಿ ಅವರು ನನಗೆ ಸಾಕಷ್ಟು ಕಷ್ಟ ಕೊಡುತ್ತಿದ್ದಾರೆ ಎಂದು ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಗಣಿ ನಾಡಿನಲ್ಲಿ ರಾಜಕೀಯ ದಿನೇ ದಿನೇ ರಂಗೇರುತ್ತಿದೆ. ಒಂದು ಕಾಲದಲ್ಲಿ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿ ಅಧಿಕಾರಕ್ಕೆ ತಂದ ರೆಡ್ಡಿಗಾರು ಇಂದು ಬಿಜೆಪಿ ವಿರುದ್ಧವೇ ಕಿಡಿ ಕಾರುವ ಮೂಲಕ ಬಿಜೆಪಿಗೆ ಮುಜುಗರ ತಂದಿದ್ದಾರೆ.
ದಕ್ಷಿಣ ಭಾರತದಲ್ಲಿ ಬಿಜೆಪಿ ಪಕ್ಷಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದು, ಅದರಲ್ಲೂ ಕರ್ಣಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪ್ರಮುಖ ಕಾರಣ ಗಾಲಿ ಜನಾರ್ದನ ರೆಡ್ಡಿ ಅವರು. ಹೌದು ಒಂದು ಕಾಲದಲ್ಲಿ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಆದ್ರೆ ಇಂದು ಬಿಜೆಪಿಗೆ ರೆಡ್ಡಿ ಬಳಗ ಬೇಕಾಗಿಲ್ಲ. ಅಕ್ರಮ ಗಣಿಗಾರಿಕೆ ಆರೋಪ ಹಿನ್ನೆಲೆಯಲ್ಲಿ ರೆಡ್ಡಿ ಜೈಲು ಸೇರಿದ್ದರು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮನಸ್ಸು ಮಾಡಿದ್ರೆ, ರೆಡ್ಡಿ ಅವರ ಮೇಲೆ ಕೃಪೆ ತೋರಬಹುದಾಗಿತ್ತು. ಆದ್ರೆ ಇಂದು ರೆಡ್ಡಿ ಬಿಜೆಪಿಗೆ ಬೇಕಿಲ್ಲ. ಅದೇ ಕಾರಣಕ್ಕಾಗಿ ರೆಡ್ಡಿಯನ್ನು ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲು ಪಕ್ಷ ಹಿಂದೇಟು ಹಾಕುತ್ತಿದೆ. ಇದೇ ಕಾರಣಕ್ಕೆ ರೆಡ್ಡಿ ಪಕ್ಷ ತೊರೆಯುವ ಮಾತನಾಡುತ್ತಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಜನಾರ್ದನ ರೆಡ್ಡಿ, ನಾನು ನವಂಬರ್ 6ರ ಬಳಿಕ ಬಳ್ಳಾರಿಯಲ್ಲಿ ಇರುವ ಹಾಗೆ ಇಲ್ಲ. ಸುಪ್ರೀಂಕೋರ್ಟ್ ಆದೇಶ ಹಿನ್ನೆಲೆ, ನವೆಂಬರ್ 6ರ ಬಳಿಕ ಬಳ್ಳಾರಿ ಬಿಡಬೇಕು. ಆದ್ರೆ ನಾ ಬಳ್ಳಾರಿ ಬಿಟ್ಟು ಬೆಂಗಳೂರಿನಲ್ಲಿ (Bengaluru) ಇರಲ್ಲ. ಇಲ್ಲೇ ಆಸು ಪಾಸಿನಲ್ಲಿ ಇರುವೆ. ಮುಂದಿನ ದಿನ ನಾನು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ.
ಸೋಮಶೇಖರ್ ರೆಡ್ಡಿ, ಮುಸ್ಲಿಂ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು. ಆದ್ರೆ ಆಗ ಅವರು, ಹಾಗೆ ಹೇಳಿಕೆ ನೀಡಲು ಕಾರಣ ಬೇರೆ ಇದೆ. ಅವರು ಅಂದು ಹೇಳಿಕೆ ನೀಡಿ ಕ್ಷಮೆ ಕೂಡಾ ಕೇಳಿದ್ದರು. ಆದ್ರೆ ಹಾಗೆ ಹೇಳಿಕೆ ನೀಡಲು ಕಾಣದ ಕೈಗಳ ಒತ್ತಡ ಇತ್ತು. ಅವರು ಹೇಳಿದ ಹಾಗೆ ರೆಡ್ಡಿ ಹೇಳಿಕೆ ನೀಡಿದ್ದಾರೆ. ಮುಂದಿನ ದಿನದಲ್ಲಿ ನಾನು ರೆಡ್ಡಿ ಹಾಗೆ ಹೇಳಿಕೆ ನೀಡುವಂತೆ ಯಾರು ಹೇಳಿದ್ದು ಎನ್ನುವುದನ್ನು ಬಹಿರಂಗ ಪಡಿಸುತ್ತೇನೆ ಎಂದು ಜನಾರ್ದನ ರೆಡ್ಡಿ ಹೊಸ ಬಾಂಬ್ ಸಿಡಿಸಿದ್ದಾರೆ.