ಜೈಪುರ: ವಿದ್ಯಾರ್ಥಿಗಳಲ್ಲಿ ರಾಷ್ಟ್ರೀಯತೆ ಮೂಡಿಸುವ ಉದ್ದೇಶದಿಂದ ವಸುಂಧರ ರಾಜೇ ನೇತೃತ್ವದ ರಾಜಸ್ಥಾನ ಸರ್ಕಾರ ಹೊಸ ಆದೇಶ ಹೊರಡಿಸಿದೆ.
ರಾಜ್ಯದ ಸುಮಾರು 800 ಹಾಸ್ಟೆಲ್ ಗಳಲ್ಲಿ 40 ಸಾವಿರ ನಿವಾಸಿಗಳಿದ್ದು, ಪ್ರತಿದಿನ ಬೆಳಗ್ಗೆ 7 ಗಂಟೆಗೆ ರಾಷ್ಟ್ರಗೀತೆ ಹಾಡಬೇಕು ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಇದೀಗ ನೋಟೀಸ್ ಜಾರಿಗೊಳಿಸಿದೆ.
ಬೆಳಗ್ಗಿನ ಪ್ರಾರ್ಥನೆಯ ಜೊತೆಗೆ ರಾಷ್ಟ್ರಗೀತೆ ಹಾಡಬೇಕೆಂದು ಆದೇಶಿಸಲಾಗಿದೆ. ನವೆಂಬರ್ 26ರಿಂದಲೇ ಈ ಹೊಸ ನಿಯಮ ಜಾರಿಯಾಗಿದೆ. ರಾಜ್ಯದ ಹಲವಾರು ವಸತಿ ಶಾಲೆಗಳಲ್ಲಿ ಈಗಾಗಲೇ ಈ ನಿಯಮವನ್ನ ಅನುಸರಿಸುತ್ತಿದ್ದಾರೆ ಅಂತ ಇಲಾಖೆಯ ನಿರ್ದೇಶಕ ಡಾ. ಸಮಿತ್ ಶರ್ಮಾ ಹೇಳಿದ್ದಾರೆ.
ಕಳೆದ ಅಕ್ಟೋಬರ್ ನಲ್ಲಿ ಜೈಪುರದ ಪುರಸಭೆ ತನ್ನ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಬೆಳಗ್ಗೆ ರಾಷ್ಟ್ರಗೀತೆ ಹಾಗೂ ಸಂಜೆ ವಂದೇ ಮಾತರಂ ಹಾಡುವಂತೆ ಹೇಳಿತ್ತು. ಹಾಡಲು ಇಷ್ಟವಿಲ್ಲದವರು ಪಾಕಿಸ್ತಾನಕ್ಕೆ ಹೋಗಿ ಅಂತ ಅಲ್ಲಿನ ಮೇಯರ್ ಅಶೋಕ್ ಲಾಹೋಟಿ ಹೇಳಿದ್ದರು.
ಕಳೆದ ವರ್ಷ ರಾಜ್ಯದ ಶಿಕ್ಷಣ ಇಲಾಖೆ ಪ್ರತಿ ಶಾಲೆಯಲ್ಲಿ ಸೂರ್ಯ ನಮಸ್ಕಾರ ಕಡ್ಡಾಯ ಮಾಡಿತ್ತು. ನಂತರ ಅದನ್ನ ಐಚ್ಛಿಕ ಮಾಡಲಾಯ್ತು.