– ದೇಶದ ಉದ್ದಗಲಕ್ಕೂ ಬಿಜೆಪಿ ಗಾಳಿ ಬೀಸುತ್ತಿದೆ
ಬೆಂಗಳೂರು: ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ಚುನಾವಣೆಯಲ್ಲಿ ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದ ಮುಖ್ಯಮಂತ್ರಿಯವರಿಗೆ ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಜನ ಸ್ಪಷ್ಟವಾದ ಉತ್ತರ ನೀಡಿದ್ದಾರೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಪಂಚ ರಾಜ್ಯ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರಪ್ರದೇಶ ಹಾಗೂ ಉತ್ತರಾಖಂಡದ ಗೆಲುವು ನಂಜನಗೂಡು ಮತ್ತು ಗುಂಡ್ಲುಪೇಟೆಯಲ್ಲಿ ನಡೆಯೋ ಉಪಚುನಾವಣೆಗೆ ದೊಡ್ಡ ಶಕ್ತಿಯನ್ನು ತಂದುಕೊಟ್ಟಂತಾಗಿದೆ. ಮುಂದೆ ಬಿಜೆಪಿ ಕರ್ನಾಟಕದಲ್ಲಿ 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆದ್ದು ಅಧಿಕಾರ ನಡೆಸೋದಕ್ಕೆ ಇದು ನಾಂದಿಯಾಗಿದೆ ಅಂತಾ ಹೇಳಿದ್ರು.
ಇಡೀ ದೇಶದ ಉದ್ದಗಲಕ್ಕೂ ಭಾರತೀಯ ಜನತಾ ಪಾರ್ಟಿಯ ಗಾಳಿ ಬೀಸುತ್ತಿದೆ. ಕರ್ನಾಟಕ ರಾಜ್ಯದಲ್ಲೂ ಅದೇ ಉತ್ಸಾಹ ಇರುವಂತಹ ಈ ಸಂದರ್ಭದಲ್ಲಿ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕುವ ಸಲುವಾಗಿ ಯಾವಾಗ ಬೇಕಾದ್ರೂ ಚುನಾವಣೆ ಬರಬಹುದು. ಡೈರಿ ಹಗರಣವನ್ನು ಸಿಬಿಐಗೆ ವಹಿಸಿದ್ರೆ ಎಲ್ಲರ ಬಣ್ಣ ಬಯಲಾಗಲಿದೆ. ಗೋಮಾಳಗಳ ಜಮೀನನ್ನು ಕಬಳಿಸಿರುವ ಬಗ್ಗೆ ಅನೇಕ ದಾಖಲೆಗಳು ನಮ್ಮಲ್ಲಿವೆ. ಅದೇ ರೀತಿ ಬಿಬಿಎಂಪಿಯಲ್ಲಿ ನಡೆದ ಅನೇಕ ಹಗರಣಗಳ ಬಗ್ಗೆ ನಮ್ಮಲ್ಲಿ ಮಾಹಿತಿಯಿದೆ. ಒಟ್ಟಿನಲ್ಲಿ ಕಳೆದ 4 ವರ್ಷಗಳಲ್ಲಿ 90 ಸಾವಿರ ಕೋಟಿಗೂ ಹೆಚ್ಚು ಹಣ ಸಾಲ ಮಾಡಿರುವುದೇ ಸಿದ್ದರಾಮಯ್ಯನವರ ದೊಡ್ಡ ಸಾಧನೆ. ಇವೆಲ್ಲವನ್ನೂ ಕೂಡ ಬಯಲು ಮಾಡ್ತೇವೆ. ನಾಳೆ ಈ ಎರಡೂ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ ಸರ್ಕಾರದ ವೈಫಲ್ಯ ಹಾಗೂ ಭ್ರಷ್ಟಾಚಾರ ಹಗರಣಗಳ ವಿರುದ್ಧ ನಮ್ಮ ಹೋರಾಟವಿರುತ್ತದೆ ಅಂತಾ ಅಂದ್ರು.
ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ಎರಡೂ ರಾಜ್ಯಗಳಲ್ಲಿ ಹಗರಣಗಳನ್ನು ಬಟ್ಟ ಬಯಲು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಯಶಸ್ಸು ಕಂಡಿದೆ. ಅದಕ್ಕಿಂತ ದೊಡ್ಡ ಪ್ರಮಾಣದಲ್ಲಿ ಹಗರಣಗಳ ಸುರಿಮಾಲೆಯೆ ಸುತ್ತಿಕೊಂಡಿರುವುದು ಈ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ. ಹೀಗಾಗಿ ಹೈಕಮಾಂಡ್ ಇವರೆಲ್ಲರನ್ನ ತುರ್ತಾಗೆ ದೆಹಲಿಗೆ ಬರಮಾಡಿಕೊಳ್ಳುವ ಪ್ರಯತ್ನ ನಡೆದಿದೆ. ಕಾಂಗ್ರೆಸ್ ಗೆ ದೊಡ್ಡ ಮಟ್ಟದ ಹಿನ್ನಡೆಯಾಗುತ್ತದೆ ಎಂಬುವುದು ಪಕ್ಷದ ಮುಖಂಡರಿಗೆ ಸ್ಪಷ್ಟವಾಗಿದೆ. ಬಹುಶಃ ಉತ್ತರಪ್ರದೇಶದಲ್ಲಿ ಯಾವ ರೀತಿ ಫಲಿತಾಂಶ ಬಂತೋ, ಅದೇ ರೀತಿ ಕರ್ನಾಟಕದಲ್ಲೂ ಗೆಲುವು ಸಾಧಿಸಲಿದ್ದೇವೆ. ಇದಕ್ಕೆ ಜನರ ಆಶೀರ್ವಾದ, ದೈವ ಬಲ, ಜನಬಲವಿದೆ. ಹಾಗೆಯೇ ನಾವು ಮಾಡಿರುವ ಸಾಧನೆಯಿದೆ ಅಂತಾ ಹೇಳಿದ್ದಾರೆ.
ಸಿಎಂ ವಿರುದ್ಧ ಚಾಟಿ: ಎಲ್ಲ ವರ್ಗದ ಜನರ ಬೆಂಬಲದೊಂದಿಗೆ ನಾವು ಇಂದು ಚುನಾವಣೆಯಲ್ಲಿ ಗೆದಿದ್ದೇವೆ. ಹಾಗಾದ್ರೆ ಅಲ್ಪ ಸಂಖ್ಯಾತ ಮುಸ್ಲಿಂ ಮಂದಿಗಳು ಇಷ್ಟು ದೊಡ್ಡ ಪ್ರಮಾಣದಲ್ಲಿ ಸೀಟುಗಳನ್ನು ಕೊಟ್ಟಿದ್ದೀರಲ್ವಾ ಯಾಕೆ ಗೆಲ್ಲಲು ಸಾಧ್ಯವಾಗಿಲ್ಲ. ಜಾತಿ ಎಂಬ ವಿಷ ಬೀಜ ಬಿತ್ತು ರಾಜಕಾರಣ ಮಾಡಿರೋದಕ್ಕೆ ಜನ ತಕ್ಕ ಉತ್ತರ ಕೊಟ್ಟಿದ್ದಾರೆ ಅಂತಾ ಸಿಎಂ ವಿರುದ್ಧ ಬಿಎಸ್ವೈ ಚಾಟಿ ಬೀಸಿದ್ರು.
ಉತ್ತರಪ್ರದೇಶದಲ್ಲಿ ಜನರ ಭಾವನೆಯ ಜೊತೆ ಬಿಜೆಪಿ ಆಟ ಆಡಿದೆ. ಹಿಂದೂಗಳ ವಿಚಾರವನ್ನು ಪ್ರಸ್ತಾಪ ಮಾಡಿ ಮತ ಗಳಿಸಿದೆ. ಕರ್ನಾಟಕದಲ್ಲಿ ಇದೇ ರೀತಿ ಆಗಲು ಸಾಧ್ಯವೇ ಇಲ್ಲ. ಅವರು ಗೆದ್ದೇ ಗೆಲ್ತೀವಿ ಅನ್ನೋ ಭ್ರಮೆಯಲ್ಲಿದ್ದಾರೆ ಅಂತಾ ಮುಖ್ಯಮಮಂತ್ರಿ ಸಿದ್ದರಾಮಯ್ಯ ಹೇಳಿದ್ದರು.
ಇದನ್ನೂ ಓದಿ: ಮೋದಿ ಅಲೆ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವೇ: ಸಿಎಂ ಪ್ರಶ್ನೆ