ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಬಿಜೆಪಿ ಸೇರುವುದಕ್ಕೆ ಬಿಜೆಪಿಯಲ್ಲೇ ವಿರೋಧ ವ್ಯಕ್ತವಾಗಿದೆ.
ಕುಂದಾಪುರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಸಮಾವೇಶದಲ್ಲಿ ಕೆಲ ಬಿಜೆಪಿ ಕಾರ್ಯಕರ್ತರು ಬಹಿರಂಗ ಆಕ್ರೋಶ ವ್ಯಕ್ತಪಡಿಸಿ ಬ್ಯಾನರ್ ಪ್ರದರ್ಶಿಸಿದ್ರು. ಈ ವೇಳೆ ಮಧ್ಯಪ್ರವೇಶಿಸಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಲಾಡಿಯೇ ನಮ್ಮ ನಾಯಕ, ಅವರೇ ಮುಂದಿನ ಶಾಸಕ. ಒಪ್ಪದವರು ಈಗಲೇ ಪಕ್ಷ ಬಿಟ್ಟು ಹೋಗಿ ಅಂತಾ ಗುಡುಗಿದ್ರು. ಹಾಲಾಡಿ ಮತ್ತು ಬಿಜೆಪಿ ಬಣಗಳ ಗಲಾಟೆಯಿಂದಾಗಿ ಪೊಲೀಸರು ಅನಿವಾರ್ಯವಾಗಿ ಲಾಠಿಜಾರ್ಜ್ ಮಾಡ್ಬೇಕಾಯ್ತು.
ಇದೇ ವೇಳೆ ಸಿಪಿಎಂ ಬೆಂಬಲದಿಂದ ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆಯಾಗಿದೆ ಎಂಬುದು ಸ್ಪಷ್ಟವಾಗಿದೆ. ಕೇರಳದಲ್ಲಿ ಬಿಜೆಪಿ ನೇತೃತ್ವದಲ್ಲಿ ಹಲವು ಹೋರಾಟ ನಡೆದಿದೆ ಆದರೂ ಕೊಲೆಗಳ ಸರಣಿ ಮುಂದುವರೆದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ
ಸರ್ಕಾರ ಕೊಲೆ ಆರೋಪಿಗಳನ್ನು ಬಂಧಿಸುವ ವಿಶ್ವಾಸ ನಮಗಿಲ್ಲ. ಈ ಹತ್ಯೆಯನ್ನು ಖಂಡಿಸುತ್ತೇನೆ. ಮಣಪ್ಪುರಂ ಕಣ್ಣೂರು ದಾಟಿ ಕ್ರೌರ್ಯ ಕರಾವಳಿಗೆ ಬರಲು ಬಿಡಲ್ಲ. ರಾಜ್ಯದಲ್ಲೂ ಹಿಂದೂ ಯುವಕರ ಕೊಲೆಯಾಗುತ್ತಿದೆ. ಸಿಎಂ ಉಗ್ರ ಸಂಘಟನೆಗಳ ಜೊತೆ ಸ್ನೇಹ ಬೆಳೆಸ್ತಿದ್ದಾರೆ ಎಂದು ಆರೋಪಿಸಿದರು.
ಕರಾವಳಿಯ ಯುವಕರು ಐಸೀಸ್, ಸೇರ್ಪಡೆಯಾಗುತ್ತಿದ್ದಾರೆ. ಮಂಗಳೂರಲ್ಲಿ ಎನ್ಐಎ ಕಚೇರಿ ಕೂಡಲೇ ತೆರೆಯಬೇಕು. ಕೇಂದ್ರಕ್ಕೆ ಈ ಬಗ್ಗೆ ಮನವಿ ಮಾಡಿ ಒತ್ತಡ ಹೇರುತ್ತೇನೆ ಎಂದು ಹೇಳಿದರು.