ಬೆಂಗಳೂರು: ನರೇಂದ್ರ ಮೋದಿಯವರೇ ಎರಡೆರಡು ಕಡೆ ಸ್ಪರ್ಧಿಸಿದ್ರು. ಆ ಸಂದರ್ಭದಲ್ಲಿ ಮೋದಿಯವರಿಗೆ ಭಯ ಇತ್ತಾ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ನಿವಾಸಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಭೇಟಿ ನೀಡಿದರು. ಈ ವೇಳೆ ಪ್ರಕಾಶ್ ಜಾವ್ಡೇಕರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉತ್ತರ ಕರ್ನಾಟಕದ ಜನ ಸಿಎಂ ಸ್ಪರ್ಧೆ ಮಾಡಿ ಅಂತಾ ಕೇಳಿಕೊಂಡ್ರು. ಹೀಗಾಗಿ ಸಿಎಂ ಬಾದಾಮಿಯಲ್ಲೂ ಸ್ಪರ್ಧಿಸುತ್ತಿದ್ದಾರೆ. ಮಾತಾಡುವಾಗ ನೋಡಿಕೊಂಡು ಮಾತಾಡಬೇಕು ಎಂದು ತಿರುಗೇಟು ನೀಡಿದ್ರು.
ಬಿಜೆಪಿಯಲ್ಲೇ ಭಿನ್ನಮತ ಇದೆ. ಯಡಿಯೂರಪ್ಪ, ಈಶ್ವರಪ್ಪ ಬಡಿದಾಡಿಕೊಂಡಿದ್ರು. ಬಿಜೆಪಿಯಲ್ಲಿರುವಷ್ಟು ಒಳ ಜಗಳ ಬೇರೆಲ್ಲೂ ಇಲ್ಲ. ಬಿಜೆಪಿಯಲ್ಲಿ ಜೈಲಿಗೆ ಹೋಗಿ ಬಂದವರೇ ಹೆಚ್ಚು ಮಂದಿ. ಉತ್ತರನ ಪೌರುಷ ಒಲೆ ಮುಂದೆ ಅನ್ನೋ ಹಾಗೇ ಬಿಜೆಪಿಯವರು ಮಾಧ್ಯಮಗಳ ಮುಂದೆ ಮಾತ್ರ ಮಾತಾಡುತ್ತಾರೆ. ಕರ್ನಾಟಕದಲ್ಲಿ ಮೋದಿ ಹವಾ ಇಲ್ಲ. ಬದಲಾಗಿ ಸಿದ್ದರಾಮಯ್ಯನವರ ಹವಾ ಇದೆ ಎಂದರು.
ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳುತ್ತಿದ್ದಾರೆ. ಆದ್ರೆ ಕಾಂಗ್ರೆಸ್ 50 ಸ್ಥಾನಗಳನ್ನು ಗೆಲ್ಲಲು ಸಾಧ್ಯವಿಲ್ಲ. ಬಿಜೆಪಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದರಲ್ಲಿ ಸಂಶಯವಿಲ್ಲ ಅಂತ ಬೆಂಗಳೂರಿನಲ್ಲಿ ಬಿಜೆಪಿ ಚುನಾವಣಾ ಉಸ್ತುವಾರಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿದ್ದರು.