ಮೈಸೂರು: ದೀಪಕ್ ರಾವ್ ಹತ್ಯೆ ಹಿಂದೆ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ದೀಪಕ್ ರಾವ್ ಕೊಲೆಗೆ ಕೆಲವು ಬಿಜೆಪಿ ನಾಯಕರು ಕಾರಣಕರ್ತರಾಗಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ. ಇದೂವರೆಗೂ ನಾನು ಈ ಪ್ರಕರಣದ ಬಗ್ಗೆ ಮಾತನಾಡಿಲ್ಲ, ಇಂದು ನೀವೆಲ್ಲಾ ಕೇಳುತ್ತಿರುವುದಕ್ಕೆ ನಾನು ಉತ್ತರಿಸುತ್ತಿದ್ದೇನೆ. ದೀಪಕ್ ರಾವ್ ಕೊಲೆ ನಡೆದಾಗ ದುಷ್ಕರ್ಮಿಗಳ ಮೇಲೆ ಮುಸ್ಲಿಂ ಬಾಂಧವರು ಹಲ್ಲೆ ಮಾಡಿ ಕಾಪಾಡುವ ಪ್ರಯತ್ನ ಮಾಡಿದ್ದಾರೆ. ಆ ಮುಸ್ಲಿಂ ಬಾಂಧವರ ಹಿನ್ನೆಲೆಯಲ್ಲಿಯೇ ಪೊಲೀಸರು ನಾಲ್ಕು ಜನರನ್ನು ಬಂಧಿಸಿದ್ದಾರೆ. ಆದ್ರೆ ಆ ನಾಲ್ಕು ಜನಕ್ಕೆ ಸುಪಾರಿ ಕೊಟ್ಟಿದ್ದವರು ಯಾರೆಂಬುದನ್ನು ಸರ್ಕಾರಕ್ಕೆ ಇನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ ಎಂದು ಟೀಕಿಸಿದರು.
ದೀಪಕ್ ರಾವ್ ಕೊಲೆಯ ಮೂಲ ವ್ಯಕ್ತಿಗಳು ಯಾರೆಂಬುದನ್ನು ಇನ್ನು ಬಹಿರಂಗೊಳಿಸಿಲ್ಲ ಯಾಕೆ? ಕೊಲೆ ನಡೆದು ಇಷ್ಟು ದಿನಗಳಾದ್ರೂ ಸರ್ಕಾರ ಮಾಹಿತಿಯನ್ನು ಬಹಿರಂಗಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ನಾಲ್ಕು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಇದೂವರೆಗೂ ಸತ್ಯಾಂಶವನ್ನು ತಿಳಿಸುತ್ತಿಲ್ಲ ಯಾಕೆ ಎಂದು ಪ್ರಶ್ನಿಸಿ ಎಚ್ಡಿಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.
ನನಗಿರುವ ಮಾಹಿತಿ ಪ್ರಕಾರ, ದೀಪಕ್ ರಾವ್ ಕೊಲೆಯಲ್ಲಿ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಭಾಗಿಯಾಗಿದ್ದಾರೆ. ನಾನು ಪ್ರಕರಣ ಸಂಬಂಧ ಕೆಲವು ಮಾಹಿತಿಗಳನ್ನು ಪಡೆದಿದ್ದೇನೆ. ಈ ಎಲ್ಲ ಮಾಹಿತಿಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಹೊಂದಾಣಿಕೆ ನಡೆದಿದೆಯಾ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳು ಸತ್ಯ ಹೇಳಿದ್ದರೂ, ಸರ್ಕಾರ ಮಾತ್ರ ಮೌನವಹಿಸಿರುವುದು ಯಾಕೆ ಅಂತಾ ಪ್ರಶ್ನಿಸಿದ್ದಾರೆ.
https://www.youtube.com/watch?v=AI_z5wUiDhM
https://www.youtube.com/watch?v=p4Mfa77sfvE