ಬೀದರ್: ಕರಾವಳಿ ಭಾಗದಲ್ಲಿ ಪ್ರವಾಸ ಕೈಗೊಂಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹೈದ್ರಾಬಾದ್ ಕರ್ನಾಟಕದಲ್ಲಿ ನಾಳೆಯಿಂದ ಪ್ರವಾಸ ಕೈಗೊಳ್ಳಲಿದ್ದಾರೆ. ಅದಕ್ಕಾಗಿ ಇಂದು ರಾತ್ರಿ ಬೀದರ್ಗೆ ಆಗಮಿಸಲಿದ್ದಾರೆ.
ಬೀದರ್ ನ ಹಬ್ಸಿಕೋಟೆ ಗೆಸ್ಟ್ ಹೌಸ್ನಲ್ಲಿ ಶಾ ಇಂದು ರಾತ್ರಿ ವಾಸ್ತವ್ಯ ಹೂಡಲಿದ್ದಾರೆ. ಭಾನುವಾರ ಬೆಳಗ್ಗೆ ಬೀದರ್ನ ಐತಿಹಾಸಿಕ ಧಾರ್ಮಿಕ ತಾಣಗಳಾದ ನರಸಿಂಹ ಝರಣಾ, ಗುರುದ್ವಾರಾಗಳಿಗೆ ಭೇಟಿ ನೀಡಲಿದ್ದಾರೆ. ಬಳಿಕ ಹುಮನಾಬಾದ್ನ ಮಂಗಲಗಿ ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತ ಶಿವರಾಜ ಬಸವಲಿಂಗಪ್ಪ ಮನೆಗೆ ಭೇಟಿ ನೀಡಲಿದ್ದಾರೆ. ನಂತರ ರಾಹುಲ್ ಹೋಗಿದ್ದ ಬಸವಕಲ್ಯಾಣದ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.
ಜಗಳಕ್ಕೆ ಬ್ರೇಕ್: ರಾಜ್ಯ ಪ್ರವಾಸಕ್ಕೆ ಆಗಮಿಸುತ್ತಿರೋ ಶಾ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ನಾಯಕ ಈಶ್ವರಪ್ಪ ನಡುವಿನ ಕಾದಾಟಕ್ಕೆ ಬ್ರೇಕ್ ಹಾಕಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಏಪ್ರಿಲ್ನಲ್ಲಿ ಬಿಜೆಪಿ ಹೈಕಮಾಂಡ್ 150 ಕ್ಷೇತ್ರಗಳ ಮೊದಲ ಪಟ್ಟಿ ರಿಲೀಸ್ ಮಾಡಲಿದೆ. ಮೊದಲ ಪಟ್ಟಿಯಲ್ಲಿ ಶಿವಮೊಗ್ಗ, ಶಿಕಾರಿಪುರ ಟಿಕೆಟ್ ಘೋಷಣೆ ಮಾಡದಿರಲು ನಿರ್ಧಾರ ಮಾಡಲಾಗಿದೆ. ಎರಡನೇ ಹಂತದಲ್ಲಿ ಶಿವಮೊಗ್ಗ, ಶಿಕಾರಿಪುರ ಕ್ಷೇತ್ರದ ಟಿಕೆಟ್ ಘೋಷಣೆ ಮಾಡೋ ಸಾಧ್ಯತೆಗಳಿವೆ. ಶಿವಮೊಗ್ಗ ರಾಜಕೀಯ ಕಿತ್ತಾಟ ರಾಜ್ಯಕ್ಕೆ ವ್ಯಾಪಿಸೋದು ಬೇಡ ಎಂದು ತೀರ್ಮಾನ ಮಾಡಲಾಗಿದೆ ಎಂದು ಬಿಜೆಪಿ ಹೈಕಮಾಂಡ್ ಮೂಲಗಳು ಪಬ್ಲಿಕ್ ಟವಿಗೆ ಮಾಹಿತಿ ನೀಡಿವೆ.