ಮಂಗಳೂರು: ಹಾಲುಮಡ್ಡಿ (ದೂಪ) ಮರವೊಂದು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬವು ಬೈಕ್ ಮೇಲೆ ಬಿದ್ದು ಸಹ ಸವಾರ ಮೃತಪಟ್ಟ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಎಂಬಲ್ಲಿ ನಡೆದಿದೆ.
ಘಟನೆಯಿಂದಾಗಿ ನೆಟ್ಟಣದಿಂದ ಕಡಬ ಕಡೆಗೆ ತೆರಳುತ್ತಿದ್ದ ಕೊಂಬಾರು ಕಾಲನಿ ನಿವಾಸಿಗಳಾದ ವಾಸುದೇವ ಎಂಬವರ ಪುತ್ರ ಮನೋಹರ್(19) ಮೃತಪಟ್ಟಿದ್ದು, ದಿ| ಸೆಲ್ವರಾಜು ಎಂಬವರ ಪುತ್ರ ಪ್ರಭಾಕರ್ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರ್ದಾಳದಿಂದ ಕೈಕಂಬವರೆಗೆ ಸುಬ್ರಹ್ಮಣ್ಯ – ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಇಕ್ಕೆಡೆಗಳಲ್ಲೂ ದೂಪದ ಮರಗಳ ಬುಡಗಳನ್ನು ಟೊಳ್ಳಾಗಿಸಿ ಎಣ್ಣೆ ತೆಗೆದು ಮರಗಳನ್ನು ಕಡಿಯದೆ ಹಾಗೇ ಬಿಟ್ಟ ಪರಿಣಾಮ ಗಾಳಿ ಬೀಸಿದಾಗ ಮರಗಳು ರಸ್ತೆಗುರುಳುತ್ತಿದ್ದು, ಕಳೆದೆರಡು ವರ್ಷಗಳಿಂದ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದೆ.
ಅರಣ್ಯ ಇಲಾಖೆಯವರು ಕಾನೂನು ನೆಪವೊಡ್ಡಿ ಇಂತಹ ಮರಗಳನ್ನು ಕಡಿಯುವಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದಾರೆ ಎಂದು ಊರವರು ಆರೋಪಿಸಿದ್ದಾರೆ.