ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಗೌಡನಬಾವಿಯಲ್ಲಿ ಪುಂಡ ಯುವಕರು ಯುವತಿಯ ಫೋಟೋ ವಿಡಿಯೋವನ್ನು ಫೇಸ್ ಬುಕ್ನಲ್ಲಿ ಹರಿಬಿಟ್ಟ ಹಿನ್ನೆಲೆ ತಂದೆ ಮಗಳು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದರು.
ಈ ಪ್ರಕರಣದ ಇನ್ನೊಂದು ಭಯಾನಕ ಸುದ್ದಿ ಹೊರಬಿದಿದ್ದು, ಯುವತಿಯ ಫೋಟೋ ಹಾಗೂ ವಿಡಿಯೋ ಹರಿಬಿಟ್ಟಿದ್ದನ್ನು ಪ್ರಶ್ನಿಸಿದ್ದ ಯುವಕನಿಗೆ ಇನ್ನೊಂದು ಗುಂಪು ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಎಕ್ಸ್ ಕ್ಲೂಸಿವ್ ವಿಡಿಯೋ ಲಭ್ಯವಾಗಿದೆ.
ಗೌಡನಬಾವಿ ಗ್ರಾಮಪಂಚಾಯ್ತಿ ಕಚೇರಿಯಲ್ಲಿ ದೊಣ್ಣೆ, ಬಂಬೂ, ಕಟ್ಟಿಗೆಯಿಂದ ಕನಕರಾಯ ಅನ್ನೋ ಯುವಕನಿಗೆ ಮಲ್ಲಿಕಾರ್ಜುನ್, ಮಂಜುನಾಥ್, ಮಲ್ಲಪ್ಪ ಹಾಗೂ ರವಿ ಎಂಬವರು ಸೇರಿ ಒಟ್ಟು 8 ಜನ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.
ಕಾಲು, ಕೈ ಮುರಿದಿದ್ದು ಕನಕರಾಯನ ಸ್ಥಿತಿ ಗಂಭೀರವಾಗಿದ್ದು, ಬಳ್ಳಾರಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕಳೆದ ಫೆಬ್ರವರಿ 25 ರಂದು ಗೌಡನಬಾವಿಯಲ್ಲಿ ಊರಜಾತ್ರೆ ನಡೆದಿತ್ತು. ಈ ವೇಳೆ ಕುಂಭ ಹೊತ್ತಿದ್ದ ಯುವತಿ ಬಸಲಿಂಗಮ್ಮಳ ಫೋಟೋ ವಿಡಿಯೋವನ್ನ ಕೆಲ ಯುವಕರು ಫೇಸ್ಬುಕ್ನಲ್ಲಿ ಹಾಕಿದ್ದರು. ಇದನ್ನ ಪ್ರಶ್ನಿಸಿ ಕನಕರಾಯ ಮತ್ತು ಅವನ ಸ್ನೇಹಿತರು ಜಗಳವಾಡಿದ್ದರು. ಹಿರಿಯರ ಸಮ್ಮುಖದಲ್ಲಿ ಎಲ್ಲಾ ಮುಗಿದಿತ್ತು, ಆದರೆ ಮಾರ್ಚ್ 24ರಂದು ಪುನಃ ಜಗಳ ತೆಗೆದು ಕನಕರಾಯನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.
ಇದರಿಂದ ಕನಕರಾಯನ ಸಂಬಂಧಿಕರು ಯುವತಿ ಬಸಲಿಂಗಮ್ಮನ ತಂದೆ ರಾಮನಗೌಡರನ್ನು ಕರೆಸಿ ಹಿಗ್ಗಾಮುಗ್ಗ ಬೈದಿದ್ದರು. ಮನನೊಂದ ರಾಮನಗೌಡ, ಬಸಲಿಂಗಮ್ಮ ಆತ್ಮಹತ್ಯೆಗೆ ಶರಣಾಗಿದ್ದರು.
ಈ ಬಗ್ಗೆ ಬಳಗಾನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಇದನ್ನೂ ಓದಿ: ಫೇಸ್ ಬುಕ್ ನಲ್ಲಿ ವಿಡಿಯೋ ಪೋಸ್ಟ್ – ತಂದೆ, ಮಗಳು ಆತ್ಮಹತ್ಯೆ