ವಿಜಯಪುರ: ಎನ್ ಕೌಂಟರ್ ನಲ್ಲಿ ಪಿಎಸ್ಐ ಗುಂಡಿಗೆ ಬಲಿಯಾದ ಭೀಮಾತೀರದ ನಟೊರಿಯಸ್ ಹಂತಕ ಧರ್ಮರಾಜ್ ಚಡಚಣ ಪ್ರಕರಣ ಮತ್ತೆ ವಿವಾದದ ಕೇಂದ್ರ ಬಿಂದುವಾಗಿದೆ. ಧರ್ಮರಾಜ್ ಸಾವಿನ ಬಗ್ಗೆ ಆತನ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಈ ಸಂಬಂಧ ತನಿಖೆಗೆ ಆಗ್ರಹಿಸಿದ್ದಾರೆ.
ಅಕ್ರಮ ಶಸ್ತ್ರಾಸ್ತ್ರ ಪತ್ತೆಗೆ ಬಂದ ಪೊಲೀಸರ ಮೇಲೆ ಗುಂಡು ಹಾರಿಸಿ, ಪಿಎಸ್ಐ ಗೋಪಾಲ ಹಳ್ಳೂರ್ ಗುಂಡಿಗೆ ಬಲಿಯಾದ ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ್ ಚಡಚಣ ಅಧ್ಯಾಯ ಅಂತ್ಯವಾಗಿದೆ. ಆದರೆ ಆತನ ಸಾವಿನ ಬಗ್ಗೆ ಭೀಮಾ ತೀರದಲ್ಲಿ ದಿನಕ್ಕೊಂದು ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಭೀಮಾತೀರದಲ್ಲಿ ಮತ್ತೆ ಗುಂಡಿನ ಮೊರೆತ – ಪಿಎಸ್ಐ ಮೇಲೆ ಫೈರಿಂಗ್ ಮಾಡಿದ ಹಂತಕ ಸಾವು
ಧರ್ಮರಾಜ್ ತಾಯಿ ವಿಮಲಾಬಾಯಿ ಮತ್ತೆ ಪ್ರಕರಣದ ಬಗ್ಗೆ ಧ್ವನಿಯತ್ತಿದ್ದು, ನನ್ನ ಮಗನನ್ನು ನಕಲಿ ಎನ್ ಕೌಂಟರ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಧರ್ಮರಾಜ್ ಸಹೋದರ ಗಂಗಾಧರನನ್ನು ಪೊಲೀಸರು ಬಂಧಿಸಿದ್ದರು. ಆತನನ್ನು ಈವರೆಗೂ ಕೋರ್ಟ್ ಗೆ ಹಾಜರುಪಡಿಸಿಲ್ಲ, ಎಲ್ಲಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡುತ್ತಿಲ್ಲ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ. ಮಹಾದೇವ ಸಾಹುಕಾರ್ ಹಾಗೂ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯಪುರ ಎಸ್ಪಿ ಧರ್ಮರಾಜ್ ತಾಯಿ ವಿಮಲಾಬಾಯಿ ನನಗೆ ಖುದ್ದಾಗಿ ಬಂದು ಯಾವುದೇ ದೂರು ನೀಡಿಲ್ಲ. ಎನ್ ಕೌಂಟರ್ ನಡೆದ ವೇಳೆ ಅನೇಕರು ಅಲ್ಲಿಂದ ಪರಾರಿಯಾಗಿದ್ದಾರೆ. ಅದರಲ್ಲೇ ಧರ್ಮರಾಜ್ ತಮ್ಮ ಗಂಗಾಧರ ಹೋಗಿರಬಹುದು. ಅದರ ಬಗ್ಗೆ ಮಾಹಿತಿ ಇಲ್ಲ.