ಕಾರವಾರ: ಕಲಾವಿದರ ಬದುಕೇ ಹಾಗೆ, ತನ್ನ ಜೀವನವನ್ನೇ ಧಾರೆಯೆರೆದು ಕಲಾಪೋಷಣೆಗೆ ನಿಲ್ಲುವ ಇವರು ತಮ್ಮ ಬದುಕನ್ನೇ ಕತ್ತಲಾಗಿಸಿಕೊಂಡು ಕಲಾ ಆರಾಧನೆ ಮಾಡುತ್ತಾರೆ.
ಹೊನ್ನಾವರ ತಾಲೂಕಿನ ನಿವಾಸಿಯಾಗಿರುವ ಮಂಜುನಾಥ್ ಭಂಡಾರಿ ಮೂರು ತಲೆಮಾರುಗಳಿಂದ ಯಕ್ಷಗಾನದ ಹಿಮ್ಮೇಳಕ್ಕೆ ಜೀವ ತುಂಬಿ ಇದಕ್ಕಾಗಿ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಆದ್ರೆ ಮಂಜುನಾಥ್ ಅವರ ಬಾಳಲ್ಲಿ ಬರ ಸಿಡಿಲಿನಂತೆ ಅನಾರೋಗ್ಯ ಆವರಿಸಿದೆ. ಒಂಬತ್ತು ವರ್ಷಗಳು ಕಳೆದರೂ ಈ ಕೂಪದಿಂದ ಹೊರಬರಲಾಗದೇ ಇಡೀ ಕುಟುಂಬ ಬಡತನ ಬದುಕು ಸಾಗಿಸುತ್ತಿದ್ದು ಬೆಳಕಿಗಾಗಿ ಹಂಬಲಿಸುತ್ತಿದೆ.
ಮೃದಂಗ, ಚಂಡೆ ವಾದಕರಾಗಿ ಇದರ ತಯಾರಿಕೆಯನ್ನು ಸಹ ಮಾಡುತ್ತಿರುವ ಈ ಕಲೆ ಮುತ್ತಜ್ಜನಿಂದ ಬಳುವಳಿಯಾಗಿ ಬಂದಿದೆ. ಮಂಜುನಾಥರ ತಂದೆ ಪ್ರಭಾಕರ್ ಪಾಂಡುರಂಗ ಭಂಡಾರಿ ಕೂಡ ಕರಾವಳಿ ಭಾಗದಲ್ಲಿ ಪ್ರಸಿದ್ಧ ಮೃದಂಗ ವಾದಕರಾಗಿದ್ದು, 2002ರಲ್ಲಿ ಅಂದಿನ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಸಹ ನೀಡಿ ಸನ್ಮಾನಿಸಿತ್ತು.
ಮಂಜುನಾಥ್ ಭಂಡಾರಿಯವರು ಮೃದಂಗ, ಚಂಡೆ ವಾದನದ ಜೊತೆಗೆ ಮಣ್ಣಿನ ಕಲಾಕೃತಿ ರಚನೆಯಲ್ಲಿಯೂ ಸಿದ್ಧಹಸ್ತರು. ಹೀಗಾಗಿ ಅನೇಕ ಸನ್ಮಾನಗಳಿಗೆ ಭಾಜನರಾಗಿದ್ದಾರೆ. ಇನ್ನು ತನ್ನ ಮಡದಿ ಶಾರದಾ, ತಂದೆ ಪಾಂಡುರಂಗ ಭಂಡಾರಿ, ಇಬ್ಬರು ಹೆಣ್ಣುಮಕ್ಕಳಾದ ಮಧುರ, ಮಾನಸಾ ಎಂಬವರೊಂದಿಗೆ ಕಲಾರಾಧನೆ ಮೂಲಕ ನೆಮ್ಮದಿ ಜೀವನ ನಡೆಸುತ್ತಿದ್ದರು. ಆದ್ರೆ ಈಗ ಇವರಿಗೆ ವಾತ ಹಾಗೂ ಮೂಳೆ ಸಮಸ್ಯೆ ಎದುರಾಗಿ ತನ್ನ ದೇಹದ ಶಕ್ತಿ ಕಳೆದುಕೊಳ್ಳುವ ಜೊತೆಗೆ ಕೈಗಳ ಮೂಳೆ ಬೆಳೆದು ಸ್ವಾಧೀನ ಇಲ್ಲದಂತಾಗಿ ಇಡೀ ಕುಟುಂಬದ ಜವಾಬ್ದಾರಿ ಹೊತ್ತ ಇವರು ದಿನದ ತುತ್ತಿಗೂ ಕಷ್ಟಪಡುವಂತಾಗಿದೆ.
ಚಿಕಿತ್ಸೆಗಾಗಿ ಕೂಡಿಟ್ಟ ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಬಲಗೈಗೆ ರಾಡ್ ಹಾಕುವ ಮೂಲಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರು. ಆದ್ರೆ ಗುಣಮುಖವಾಗುವ ಬದಲು ಕೈಯಲ್ಲಿದ್ದ ಹಣ ಖಾಲಿಯಾಗಿ ಇತ್ತ ಮೃದಂಗ, ಚಂಡೆಯ ಬಾರ್ ಕಟ್ಟಲೂ ಶಕ್ತನಾಗದೇ ಈ ಕೆಲಸವನ್ನೇ ಬಿಡುವಂತಾಯ್ತು. ಮಂಜುನಾಥ್ ಅವರ ಕಷ್ಟಕ್ಕೆ ಯಕ್ಷಾಭಿಮಾನಿಗಳು ಧನ ಸಹಾಯ ಮಾಡಿ ಮತ್ತಷ್ಟು ಚಿಕಿತ್ಸೆಗೆ ಸಹಕರಿಸಿದ್ರು. ಇದರಿಂದ ಸ್ವಲ್ಪ ಮಟ್ಟಿಗೆ ಆರೋಗ್ಯ ಸುಧಾರಿಸಿದೆ. ಆದರೆ ಬೆಳದು ನಿಂತ ಹಿರಿಯ ಮಗಳು ಮಧುರಾ ಅವರಿವರ ಸಹಾಯದಿಂದ ಬಿಎಡ್ ಮಾಡಿ ಎಂಎ ಮಾಡುತ್ತಿದ್ದಾರೆ. ಎರಡನೇ ಮಗಳು ಮಾನಸ ಅಂತಿಮ ಬಿಕಾಂ ಓದುತ್ತಿದ್ದು, ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಹಣ ಹೊಂದಿಸಲು ಕಷ್ಟಪಡುತ್ತಿದ್ದು ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಬೇಡಿದ್ದಾರೆ.
ಮಂಜುನಾಥ್ ಭಂಡಾರಿ ಕಳೆದ ಒಂಬತ್ತು ವರ್ಷಗಳಿಂದ ಅಕಾಲಿಕ ರೋಗದಿಂದಾಗಿ ಮೃದಂಗ, ಚಂಡೆ ತೆಯಾರಿಕೆಯನ್ನು ಮಾಡಲಾಗದೇ ಜೀವನಕ್ಕೆ ಆಧಾರವಾಗಿದ್ದ ಕಸುಬನ್ನು ಬಿಟ್ಟು ಪಾಶ್ರ್ವ ವಾಯು ಪೀಡಿತ ತಂದೆ, ಇಬ್ಬರ ಮಕ್ಕಳ ಶಿಕ್ಷಣ ನೋಡಿಕೊಳ್ಳಲು ಪರದಾಡುತ್ತಿದ್ದಾರೆ. ಇತ್ತ ಅವರ ಚಿಕಿತ್ಸೆ ಜೊತೆಯಲ್ಲಿ ಮಕ್ಕಳ ಓದಿಗೆ ಸಹಾಯ ಮಾಡಿದ್ದಲ್ಲಿ ಅವರ ಉದ್ಯೋಗದಿಂದ ಜೀವನ ನಡೆಸಬಹುದಾಗಿದ್ದು ಕಷ್ಟಗಳು ದೂರವಾಗುತ್ತವೆ ಎಂಬವುದು ಅಭಿಮಾನಿಗಳ ಹಂಬಲ.
ಮೂರು ತಲೆಮಾರುಗಳಿಂದ ಯಕ್ಷಗಾನ ಲೋಕಕ್ಕೆ ತನ್ನದೇ ಆದ ಸೇವೆಯನ್ನು ಈ ಕುಟುಂಬ ನೀಡುತ್ತಾ ಬಂದಿದೆ. ಇವರ ಈ ಸೇವೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ಸರ್ಕಾರ ನೀಡಿದೆ. ಒಂಬತ್ತು ವರ್ಷದ ವನವಾಸದಲ್ಲಿ ಅಭಿಮಾನಿಗಳ ಹೊರತಾಗಿ ಸರ್ಕಾರ ಮಾತ್ರ ಈ ಕುಟುಂಬದ ಸಹಾಯಕ್ಕೆ ಬರಲಿಲ್ಲ. ತಮ್ಮ ಆರೋಗ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯಕ್ಕೆ ಯಾರಾದರೂ ಸಹಾಯ ಮಾಡಬಹುದು ಎನ್ನುವ ನಿರೀಕ್ಷೆಯಲ್ಲಿ ಮಂಜುನಾಥ್ ಭಂಡಾರಿ ಇದ್ದಾರೆ.
https://youtu.be/0MfO9F_5xyg