ಮಂಡ್ಯ: ಇರಲು ಸ್ವಂತ ಮನೆಯಿಲ್ಲ, ಕೈಯಲ್ಲಿ ಹಣವಿಲ್ಲ. ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿರುವ ವ್ಯಕ್ತಿಗೆ ತನ್ನ ಇಬ್ಬರು ಪುಟಾಣಿ ಹೆಣ್ಣುಮಕ್ಕಳನ್ನು ಸಾಕುವ ಜವಾಬ್ದಾರಿ ಹೆಗಲ ಮೇಲಿತ್ತು. ನಾನೊಂದು ಫಾಸ್ಟ್ ಫುಡ್ ಅಂಗಡಿ ಆರಂಭಿಸಿ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತೇನೆ, ಸಹಾಯ ಮಾಡಿ ಎಂದು ಎರಡು ಮಕ್ಕಳ ತಂದೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮಕ್ಕೆ ಸಹಾಯ ಕೇಳಿಕೊಂಡು ಬಂದಿದ್ರು. ಇದೀಗ ಅವರ ಆಸೆಯಂತೆ ಬೆಳಕು ಕಾರ್ಯಕ್ರಮದಿಂದ ಅವರ ಉದ್ಯೋಗಕ್ಕೆ ಸಂಪೂರ್ಣ ಹಣ ಒದಗಿಸಿ ಸಹಾಯ ಮಾಡಲಾಗಿದೆ.
ಶಿವಕುಮಾರ್ ಬೆಂಗಳೂರಿನ ಸ್ವತಂತ್ರ್ಯಪಾಳ್ಯ ನಿವಾಸಿ ಲಕ್ಷ್ಮಿದೇವಿ ಎಂಬವವರೊಡನೆ ಮದುವೆಯಾಗಿತ್ತು. ಅವರ ದಾಂಪತ್ಯಕ್ಕೆ ಸಾಕ್ಷಿ ಎಂಬಂತೆ ಸ್ವಾತಿ ಮತ್ತು ಸಂಗೀತ ಎಂಬ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದ್ದರು. ಗಂಡನ ಅನಾರೋಗ್ಯವನ್ನು ಕಂಡು ಹೆಂಡತಿ ಗಂಡನನ್ನೇ ಬಿಟ್ಟು ಹೋದ್ರು. ನಂತರ ಶಿವಕುಮಾರ್ ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಬದುಕು ಕಟ್ಟಿಕೊಳ್ಳಲು ಊರೂರು ಅಲೆಯುತ್ತಿದ್ದರು.
ಶಿವಕುಮಾರ್ ಫಾಸ್ಟ್ ಫುಡ್ ಅಂಗಡಿ ತೆರೆಯುವ ಮನಸ್ಸು ಮಾಡಿ ಬೀದಿ ಬೀದಿ ಅಲೆಯುತ್ತಾ ಹಲವರ ಬಳಿ ಹಣಕ್ಕಾಗಿ ಅಂಗಲಾಚಿದ್ರು. ಈ ವೇಳೆ ಯಾರೂ ಸಹಾಯ ಮಾಡದಿದ್ದಾಗ ಪಬ್ಲಿಕ್ ಟಿವಿ ತನ್ನ ಬೆಳಕು ಕಾರ್ಯಕ್ರಮದ ಮೂಲಕ ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ಸ್ವಾವಲಂಬಿ ಜೀವನಕ್ಕಾಗಿ ಫಾಸ್ಟ್ ಫುಡ್ ಅಂಗಡಿ ತೆರೆಯಲು ಬೇಕಾದ ಸಂಪೂರ್ಣ ವಸ್ತುಗಳನ್ನು ಖರೀದಿಸಿಕೊಟ್ಟಿದ್ದು ಶಿವಕುಮಾರ್ ಸಂತೋಷದಿಂದ ಹೊಸ ಬದುಕಿನೆಡೆಗೆ ಹೆಜ್ಜೆ ಹಾಕಿದ್ದಾರೆ.
ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಶಿವಕುಮಾರ್ಗೆ ಫಾಸ್ಟ್ ಫುಡ್ ಅಂಗಡಿ, ಅದಕ್ಕೆ ಬೇಕಾದ ಸ್ಟೌ, ಪಾತ್ರೆ, ಎಮರ್ಜೆನ್ಸಿ ಲೈಟ್, ಗ್ಯಾಸ್ ಸೇರಿದಂತೆ ಎಲ್ಲ ವಸ್ತುಗಳನ್ನು ಖರೀದಿಸಿ ಕೊಟ್ಟಿದೆ. ಇದೀಗ ಫಾಸ್ಟ್ ಫುಡ್ ಅಂಗಡಿ ಆರಂಭಿಸಿರುವ ಶಿವಕುಮಾರ್ ವ್ಯಾಪಾರದಿಂದ ಬರುವ ಹಣದಿಂದ ತನ್ನಿಬ್ಬರು ಹೆಣ್ಣುಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುತ್ತೇನೆ. ಜೊತೆಗೆ ತಾನೂ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
https://www.youtube.com/watch?v=Lgbie2WWimY