ದಾವಣಗೆರೆ: ಈ ಸಹೋದರಿಯರಿಗೆ ಓದು ಎಂದರೆ ಪಂಚಪ್ರಾಣ, ಶಾಲೆಯಲ್ಲಿ ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಓದುತ್ತಿದ್ದರು. ಆದ್ರೆ ವಿಧಿ ಮಾತ್ರ ಇವರ ಜೀವನದಲ್ಲಿ ಆಟವಾಡಿತ್ತು. ವಿದ್ಯಾಭ್ಯಾಸಕ್ಕೆ ಹಣ ಕಟ್ಟಲು ಹಣವಿಲ್ಲದೇ ಒದ್ದಾಡುವಂತ ಪರಿಸ್ಥಿತಿ ಬಂದೊದಗಿತ್ತು. ಆದ್ರೆ ಈ ಸಹೋದರಿಯರಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ನೆರವಿಗೆ ಬಂದಿದೆ.
ತಮಗೆ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದು ಎನ್ನುವ ಖುಷಿಯನ್ನು ಸಹೋದರಿಯರು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮಕ್ಕಳ ಅನಂದವನ್ನು ನೋಡಿ ಅವರ ತಾಯಿಯು ಸಹ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
ನಗರದ ಶ್ರೀರಾಮ ನಗರದ ನಿವಾಸಿಗಳಾದ ಅಂಜಿನಪ್ಪ ಹಾಗೂ ಮಂಜುಳಾ ದಂಪತಿಯ ಮಕ್ಕಳಾದ ರಂಜಿತಾ ಹಾಗೂ ರಕ್ಷಿತಾ ಸಿದ್ದಗಂಗಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತಿದ್ದರು. ಎಗ್ ರೈಸ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದ ಅಂಜಿನಪ್ಪ ಕೆಲ ತಿಂಗಳಗಳ ಹಿಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾದ್ರು.
ಇದರಿಂದ ಜೀವನ ನಡೆಸುವುದೇ ಕಷ್ಟವಾಗಿದ್ದ ಸಮಯದಲ್ಲಿ ವಿದ್ಯಾಭ್ಯಾಸಕ್ಕೆ ಹಣ ಕಟ್ಟುವುದು ತುಂಬಾ ಹೊರೆಯಾಗಿತ್ತು. ಹಾಗಾಗಿ ಶಾಲೆಯ ಶುಲ್ಕ ಕಟ್ಟಲು ಕಷ್ಟವಾಗಿದ್ದಾಗ ಶಾಲೆಯನ್ನು ಬಿಟ್ಟು ರೊಟ್ಟಿ ಮಾಡಿ ತಂದೆ ತಾಯಿಗೆ ಆಸರೆಯಾಗಬೇಕು ಎಂದುಕೊಂಡಿದ್ದರು. ಆಗ ಇವರ ಆಸರೆಗೆ ಬಂದಿದ್ದು ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ. ಈ ಕಾರ್ಯಕ್ರಮದಿಂದ ಬಡ ವಿದ್ಯಾರ್ಥಿನಿಯರ ಶಾಲಾ ಶುಲ್ಕ ಕಟ್ಟಿ ಮತ್ತೆ ಶಾಲೆಗೆ ಕಳಿಸಲಾಗಿದೆ.
ಇನ್ನು ಸಿದ್ದಗಂಗಾ ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳಿಗಿಂತ ಉತ್ತಮವಾದ ವಿದ್ಯಭ್ಯಾಸ ಮಾಡುತ್ತಿದ್ದು, ಶಾಲೆಗೆ ಒಳ್ಳೆಯ ಹೆಸರು ತರುತ್ತಾರೆ ಎನ್ನುವ ನೀರಿಕ್ಷೆ ಇಲ್ಲಿನ ಶಿಕ್ಷಕರು ಇಟ್ಟುಕೊಂಡಿದ್ದಾರೆ. ಇನ್ನೇನು ನಮಗೆ ಶಾಲೆಗೆ ಹೋಗುವುದು ಮರಿಚಿಕೆಯಾಗುತ್ತದೆ ಎನ್ನುವ ಸಮಯದಲ್ಲಿ ಪಬ್ಲಿಕ್ ಟಿವಿ ಇವರ ಆಸರೆಗೆ ಬಂದಿದೆ. ಶಾಲಾ ಶುಲ್ಕವನ್ನು ಕಟ್ಟಿ ವಿದ್ಯಾರ್ಥಿಗಳ ಮುಂದಿನ ವಿದ್ಯಭ್ಯಾಸಕ್ಕೆ ಸಹಾಯ ಮಾಡಿದೆ.