ಬೆಂಗಳೂರು: ಪ್ರತಿನಿತ್ಯ ದೀಪದ ಬೆಳಕಿನಲ್ಲಿ ಬದುಕನ್ನು ನಿಭಾಯಿಸುತ್ತಿದ್ದ ವೃದ್ಧೆಯ ಮನೆ ಬರೋಬ್ಬರಿ ಐವತ್ತು ವರ್ಷದ ಬಳಿಕ ಇದೀಗ ವಿದ್ಯುತ್ ಬೆಳಕನ್ನು ಕಂಡಿದೆ.
ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮದ ನಿವಾಸಿಯ ಅರಸಮ್ಮ ಮನೆಗೆ ಗ್ರಾಮ ಪಂಚಾಯಿತಿ ವತಿಯಿಂದ ಮನೆಗೆ ವಿದ್ಯುತ್ ಸಂಪರ್ಕವನ್ನು ಪಬ್ಲಿಕ್ ಟಿವಿ ಕಲ್ಪಿಸಿದೆ.
ಈ ಹಳ್ಳಿ ಒಂದು ಕಾಲದಲ್ಲಿ ವಜ್ರ ವೈಡುರ್ಯದಿಂದ ರಾಜಮಹಾರಾಜರು ಆಳ್ವಿಕೆ ಮಾಡಿದ್ದ ಗಂಗರಸರ ರಾಜಧಾನಿಯಾಗಿತ್ತು. ಆದ್ರೆ ಬ್ರಿಟೀಷ್ ಆಳ್ವಿಕೆ ನಂತರ ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದ್ರೂ, ಈ ವೃದ್ಧೆಯ ಮನೆಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಆದ್ರೆ ಇದೀಗ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮದ ಮೂಲಕ ಆ ವೃದ್ಧೆಯ ಬಹುದಿನದ ಕನಸು ಈಡೇರಿದೆ.
ಅವರಿಗೆ ಗಂಡ, ಮಕ್ಕಳಿಲ್ಲದ ಈ ಇಳಿಯ ವಯಸ್ಸಿನಲ್ಲಿ ಅರಸಮ್ಮ ಯಾರ ಹಂಗಿಲ್ಲದೆ, ಸ್ವಾವಲಂಬಿಯಾಗಿ ಜೀವನವನ್ನ ನಡೆಸುತ್ತಿದ್ದಾರೆ. ಐವತ್ತು ವರ್ಷದಿಂದಲು ಈ ಅಜ್ಜಿಯ ಮನೆಗೆ ವಿದ್ಯುತ್ ಸಂಪರ್ಕವಿಲ್ಲದೆ, ಸಂಪರ್ಕ ಪಡೆಯಲು ವೃದ್ಧ ಅರಸಮ್ಮ ಸಾಕಷ್ಟು ಬಾರಿ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು, ಸ್ಥಳೀಯ ಪಂಚಾಯಿತಿ, ಸೇರಿದಂತೆ ಜನಪ್ರತಿನಿಧಿಗಳಿಗೂ ಅರ್ಜಿ ನೀಡಿದ್ದರು. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಕತ್ತಲೆಯಲ್ಲಿಯೇ ಜೀವನ ಮಾಡುತ್ತಿದ್ದರು.
ಕತ್ತಲೆಯಲ್ಲಿ ಜೀವನ ಕಂಡುಕೊಂಡ ಅಜ್ಜಿ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮಕ್ಕೆ ಬೆಳಕು ಅರಸಿ ಬಂದಿದ್ದರು. ಈಗ ಕತ್ತಲು ಕವಿದಿದ್ದ ಅಜ್ಜಿಯ ಮನೆಗೆ ಬೆಳಕು ಆಸರೆಯಾಗಿದೆ. ಮನೆಗೆ ವಿದ್ಯುತ್ ಸಂಪರ್ಕ ಸಿಕ್ಕಿದೆ. ಮನೆಗೆ ಬೆಳಕು ಸಿಕ್ಕಿದ ಖುಷಿಯಲ್ಲಿದ್ದಾರೆ ಅಜ್ಜಿ ನರಸಮ್ಮ.
ಬೆಳಕು ಕಾರ್ಯಕ್ರಮದ ಮೂಲಕ ಅಜ್ಜಿಯ ಮನೆಗೆ ಬೆಳಕು ಹರಿಸಲು ಮಣ್ಣೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸ್ಥಳೀಯರ ಸಹಕಾರದೊಂದಿಗೆ ನೂತನ ವಿದ್ಯುತ್ ಕಂಬಗಳ ಅಳವಡಿಸಿ, ಅಜ್ಜಿಯ ಮನೆಗೆ ಉಚಿತವಾಗಿ ಮನೆಗೆ ವಿದ್ಯುತ್ ಸಂಪರ್ಕ ನೀಡಿ ಕತ್ತಲಿನಿಂದ ಬೆಳಕಿನ ಮಾರ್ಗವನ್ನು ತೋರಿಸಲಾಗಿದೆ.
ಒಟ್ಟಾರೆ ಬರೋಬ್ಬರಿ 50 ವರ್ಷಗಳಿಂದ ಕಣ್ಣಿದ್ದು ಕುರುಡಿಯಂತೆ, ಕತ್ತಲು ಕವಿದ ಮನೆಯಲ್ಲಿಯೇ ವಾಸವಾಗಿ ಸ್ವಾಭಿಮಾನದ ಜೀವನ ಮಾಡುತ್ತಿದ್ದ ಅಜ್ಜಿಯ ಬದುಕಿಗೆ ಬೆಳಕು ಆಸರೆಯಾಗಿದೆ. ಇನ್ನಾದ್ರೂ ಅಜ್ಜಿಯ ಬದುಕಿನ ಬೆಳಕು ಪ್ರಜ್ವಲಿಸಲಿ ಎಂಬುದು ಬೆಳಕು ಕಾರ್ಯಕ್ರಮದ ಆಶಯ.
https://www.youtube.com/watch?v=4NGmO5MjerQ