ನೆಲಮಂಗಲ: ತನ್ನ ಇಳಿ ವಯಸ್ಸಿನಲ್ಲಿ ಯಾರ ಹಂಗಿಲ್ಲದೆ, ಸ್ವಾವಲಂಬಿಯಾಗಿ ಜೀವನವನ್ನ ನಡೆಸುತ್ತಿರುವ ವೃದ್ಧೆಯ ಹೆಸರು ಅರಸಮ್ಮ. ಸುಮಾರು 75 ವರ್ಷ ವಯಸ್ಸು. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಮಣ್ಣೆ ಗ್ರಾಮದ ನಿವಾಸಿ.
ಒಂದು ಕಾಲದಲ್ಲಿ ಈ ಗ್ರಾಮ ರಾಜಮಹಾರಾಜರು ಆಳ್ವಿಕೆ ಮಾಡಿದ್ದ ಗಂಗರಸರ ರಾಜಧಾನಿಯಾಗಿ ಬಡವರ ಏಳಿಗೆಗಾಗಿ ಶ್ರಮಿಸುತ್ತಿದ್ದ ಕೇಂದ್ರ ಸ್ಥಾನವಾಗಿತ್ತು. ಮದುವೆಯಾದ ಕೆಲವೇ ತಿಂಗಳಲ್ಲಿ ಪತಿಯನ್ನು ಕಳೆದುಕೊಂಡ ಇವರಿಗೆ ಮಕ್ಕಳು ಕೂಡ ಇಲ್ಲ. ಆದರೆ ಗಂಡನ ನೆನಪಿನಲ್ಲಿರುವುದು ಒಂದು ಹಳೆಯ ಸೂರು ಮಾತ್ರ. ಅಜ್ಜಿ ಗಟ್ಟಿಮುಟ್ಟಾಗಿದ್ದಾಗ ಕೂಲಿನಾಲಿ ಮಾಡಿ ಜೀವನ ನಡೆಸುತಿದ್ದರು. ಆದ್ರೆ ಇದೀಗ ವಯಸ್ಸಾಗಿದ್ರು ಅವರಿವರ ಮನೆಕೆಲಸ ಮಾಡಿ ಬದುಕಿನ ಬಂಡಿ ದೂಡುತ್ತಿದ್ದಾರೆ.
ದುರಂತ ಅಂದ್ರೆ ಸ್ವಾತಂತ್ರ್ಯ ಬಂದು ದಶಕಗಳೇ ಕಳೆದ್ರೂ, ಈ ವೃದ್ಧೆಯ ಮನೆಗೆ ಮಾತ್ರ ವಿದ್ಯುತ್ ಸಂಪರ್ಕವಿಲ್ಲದೆ ಪ್ರತಿನಿತ್ಯ ದೀಪದ ಬೆಳಕಿನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಈಗಾಗಲೇ ಸಾಕಷ್ಟು ಬಾರಿ ನೆಲಮಂಗಲ ಬೆಸ್ಕಾಂ ಅಧಿಕಾರಿಗಳು, ಸ್ಥಳೀಯ ಪಂಚಾಯಿತಿ, ಸೇರಿದಂತೆ ಹಲವರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಈ ವೃದ್ಧೆಯ ಮನೆಗೂ ವಿದ್ಯುತ್ ಕಂಬಕ್ಕೂ ಕೇವಲ 200 ಮೀಟರ್ ಇದ್ದು, ಸರ್ಕಾರದ ಯಾವುದಾದರೂ ಒಂದು ಯೋಜನೆಯ ಮೂಲಕ ಉಚಿತವಾಗಿ ಸಂಪರ್ಕವನ್ನ ನೀಡಬಹುದಾಗಿದೆ. ಆದ್ರೆ ಜಡ್ಡು ಗಟ್ಟಿರುವ ನಮ್ಮ ವ್ಯವಸ್ಥೆ ಕುರುಡಾಗಿದೆ.
ಒಟ್ಟಾರೆ ಈ ವೃದ್ಧ ಮಹಿಳೆಯ ಮನೆಗೆ ಇನ್ನಾದರೂ ವಿದ್ಯುತ್ ಸಂಪರ್ಕದ ವ್ಯವಸ್ಥೆಯಾಗಬೇಕಿದೆ. ಬೆಸ್ಕಾಂ ಅಧಿಕಾರಿಗಳಿಗೆ ಹೇಳಿ ನನಗೆ ಬೆಳಕು ಕೊಡಿ ಅಂತ ಈ ಅಜ್ಜಿ ಇದೀಗ ಬೆಳಕು ಕಾರ್ಯಕ್ರಮದ ಮೊರೆ ಬಂದಿದ್ದಾರೆ.