ಬೆಳಗಾವಿ: ಮಸೂದೆ ಇನ್ನೂ ಸದನಲ್ಲಿ ಮಂಡನೆಯಾಗಲಿಲ್ಲ. ಆದರೂ ಖಾಸಗಿ ವೈದ್ಯರು ಉಗ್ರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಲ್ಲಿ ಪ್ರತಿಷ್ಠೆಗೆ ಬಿದ್ದಿರೋದು ಯಾರು ಎಂದು ಆರೋಗ್ಯ ಸಚಿವ ರಮೇಶ್ ಕುಮಾರ್ ಪ್ರಶ್ನಿಸಿದ್ದಾರೆ.
ಖಾಸಗಿ ವೈದ್ಯರ ಮುಷ್ಕರ ಕುರಿತು ಬಿಜೆಪಿಯ ನಿಲುವಳಿ ಸೂಚನೆ ಪ್ರಸ್ತಾಪಕ್ಕೆ ರಮೇಶ್ ಕುಮಾರ್ ಉತ್ತರಿಸಿ, ನನಗೆ ಪ್ರತಿಷ್ಠೆ ಏಕೆ ಬೇಕು? ನಾನು ರಾಜರ ವಂಶದವನು ಅಲ್ಲ. ನನ್ನ ಅಪ್ಪ ಎರಡನೇ ಕ್ಲಾಸ್ ಓದಿದವರು ಅಷ್ಟೇ. ಅಮ್ಮ ಅನಕ್ಷರಸ್ಥೆ. ಇಂತಹವನಿಗೆ ಪ್ರತಿಷ್ಠೆ ಏಕೆ ಬೇಕು. ನನಗೆ ಪ್ರತಿಷ್ಠೆ ಇಲ್ಲ ಎಂದು ಹೇಳಿದರು.
ವೈದ್ಯರ ಪ್ರತಿಭಟನೆಗೆ ಹೆದರಿ ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ತಿದ್ದುಪಡಿ ಮಸೂದೆಯನ್ನು(ಕೆಪಿಎಂಇ) ಪಡೆದರೆ ಮುಂದೆ ಯಾವುದೇ ಕಾಯ್ದೆ ತರಲು ಸಾಧ್ಯವಿಲ್ಲ. ನಾವು ಜನರಿಗೆ ತಲೆ ಬಾಗಬೇಕು. ಅವರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಮಸೂದೆ ಮಂಡನೆಯಾದ ಬಳಿಕ ಅದರಲ್ಲಿ ಏನಿದೆ ಎನ್ನುವುದು ಗೊತ್ತಾಗಲಿದೆ. ಇಂದು ಸಂಜೆ ಮಸೂದೆ ತಿದ್ದುಪಡಿ ಬಗ್ಗೆ ಏನು ಮಾಡಬೇಕು ಎನ್ನುವುದನ್ನು ಮುಖ್ಯಮಂತ್ರಿಗಳ ಜೊತೆ ಸೇರಿ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ನಮ್ಮ ಮೇಲೆ ಕೋಪ ಇದ್ದರೆ ಅದನ್ನು ರೋಗಿಗಳ ಮೇಲೆ ತೋರಿಸಬೇಡಿ. ವೈದ್ಯರು ಕೂಡಲೇ ಮುಷ್ಕರವನ್ನು ಕೈಬಿಡಬೇಕು ಎಂದು ಮನವಿ ಮಾಡಿದ ಅವರು, ಬಡ ರೋಗಿಗಳ ಪರವಾಗಿ ನಾವು ಕಾನೂನು ತರಲು ಮುಂದಾಗಿದ್ದೇವೆ ಎಂದು ಹೇಳುವ ಮೂಲಕ ಮಸೂದೆಯನ್ನು ಸಮರ್ಥಿಸಿಕೊಂಡರು.
ನನ್ನ ಮತ್ತು ಸಿಎಂ ಮಧ್ಯೆ ಹೊಂದಾಣಿಕೆ ಇಲ್ಲ ಎನ್ನುವುದು ಸರಿಯಲ್ಲ. 40 ವರ್ಷಗಳ ಒಡನಾಟ ನನ್ನ ಸಿಎಂ ನಡುವೆ ಇದೆ. ಸಿಎಂ ಆಡಳಿತ ನನಗೆ ತೃಪ್ತಿ ನೀಡಿದೆ. ಬಡವರ ಪರವಾದ ಯಾವುದೇ ಕೆಲಸ ನೀಡಿದ್ರು ಅದನ್ನು ಜಾರಿಗೆ ತಂದಿದ್ದಾರೆ. ಲಾಭ-ನಷ್ಟ-ವ್ಯಾಪಾರಕ್ಕೆ ನಮ್ಮ ಸಂಬಂಧ ಇಲ್ಲ. ಲೀಡರ್ ವಿರುದ್ಧ ಮಾತನಾಡುವ ಸಂಸ್ಕೃತಿ ನಮ್ಮದಲ್ಲ. ನನ್ನ ಕೊನೆ ಉಸಿರು ಇರುವವರೆಗೂ ಸಿಎಂ ಸಿದ್ದರಾಮಯ್ಯ ಜೊತೆ ನಾನು ಇರುತ್ತೇನೆ. ನಿಲುವಳಿ ಸೂಚನೆಗೆ ಇದು ಯೋಗ್ಯವಲ್ಲ. ನಿಲುವಳಿ ಸೂಚನೆ ಪ್ರಸ್ತಾಪವನ್ನು ತಿರಸ್ಕರಿಸಿ ಬೇರೆ ರೀತಿಯಲ್ಲಿ ಚರ್ಚೆ ಮಾಡಿ ಎಂದು ಅವರು ಸಭಾಪತಿಗಳಿಗೆ ಮನವಿ ಮಾಡಿದರು.
https://youtu.be/tHaPuie6qLI
https://youtu.be/V7VmWYhVdec
.