ಬೆಂಗಳೂರು: ಹೈವೇಯಲ್ಲಿ ಓಡಾಡುವ ವಾಹನಸವಾರರೇ ಇನ್ಮುಂದೆ ಹುಷಾರಾಗಿರಬೇಕು. ಯಾಕಂದ್ರೆ ರಸ್ತೆ ಪಕ್ಕದಲ್ಲಿ ನಿಂತ ಮಿಂಚಿನ ಬಳ್ಳಿಯಿಂದ ಆಪತ್ತು ನಿಮಗೆ ಕಟ್ಟಿಟ್ಟು ಬುತ್ತಿ.
ಏನಿದು ವಿಚಿತ್ರ ಸ್ಟೋರಿ ಅಂತಾ ಯೋಚನೆ ಮಾಡ್ತಿದ್ದೀರಾ. ಹೌದು. ಬೆಂಗಳೂರಿನಲ್ಲಿ ಬೀಡು ಬಿಟ್ಟಿದ್ದ ಇಂತಹ ಗ್ಯಾಂಗ್ ಸದಸ್ಯರನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಎಲೆಕ್ಟ್ರಾನಿಕ್ ಸಿಟಿಯ ಮೈಲಸಂದ್ರ- ಬೇಗೂರು ಮುಖ್ಯ ರಸ್ತೆಯ ನಡುವೆ ಯುವತಿಯೊಬ್ಬಳು ನಿಂತಿರುತ್ತಾಳೆ. ನೈಸ್ ರಸ್ತೆ ಕಿರಿದಾಗಿದ್ದರಿಂದ ವಾಹನ ನಿಧಾನವಾಗಿ ಚಲಿಸುತ್ತಿರುತ್ತವೆ. ಇದನ್ನೇ ಬಂಡವಾಳವನ್ನಾಗಿಸಿ ವಾಹನಗಳ ಲೈಟ್ ಬೆಳಕಿನಲ್ಲಿ ಮೈಮಾಟ ಪ್ರದರ್ಶಿಸಿಸುತ್ತಿರುವ ಯುವತಿಯೊಬ್ಬಳನ್ನು ಕಂಡು ನೀವೇನಾದ್ರೂ ವಾಹನ ನಿಲ್ಲಿಸಿದ್ದೀರಿ ಅಂದ್ರೆ ನಿಮ್ಮ ಕಥೆ ಮುಗಿಯಿತ್ತು ಅಂತಾನೇ ಅರ್ಥ. ಯಾಕಂದ್ರೆ ಯುವತಿ ನಿಮ್ಮೊಂದಿಗೆ ಆ ಕೂಡಲೇ ವ್ಯವಹಾರ ಕುದುರಿಸಿ ಕತ್ತಲ ದಾರಿಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲದೇ ಕತ್ತಲಲ್ಲಿ ಕುಳಿತಿದ್ದ ಆಕೆಯ ಕಡೆಯ ಹುಡುಗರಿಂದ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕುತ್ತಾಳೆ. ಬಳಿಕ ಎಲ್ಲರೂ ಸೇರಿ ಚಾಲಕರನ್ನು ಬೆದರಿಸಿ ಹಣ ಲೂಟಿ ಮಾಡುತ್ತಾರೆ.
ಘಟನೆಯ ಖಚಿತ ಮಾಹಿತಿ ಮೇರೆಗೆ ಎಲೆಕ್ಟ್ರಾನಿಕ್ ಪೊಲೀಸರು ತಡರಾತ್ರಿ ದಾಳಿ ನಡೆಸಿ ಯುವತಿ ಸೇರಿ ಐವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಮೋನಿಷಾ, ಮುತ್ತು, ಪುನೀತ್, ತುಳಸಿರಾಮ್, ಅರುಣ್ ಯಶುರಾಜ್ ಎಂದು ಗುರುತಿಸಲಾಗಿದೆ. ದಾಳಿ ವೇಳೆ ವಿಘ್ನೇಶ್, ಸ್ಟೀಫನ್, ಬಬ್ಲೂ, ಅಲೆಕ್ಸ್ ಹಾಗೂ ಅಮರ್ ಪರಾರಿಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.