ನವದೆಹಲಿ: ಉದ್ದೀಪನಾ ಮದ್ದು ಸೇವನಾ ಪರೀಕ್ಷೆಯಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ಆಲ್ ರೌಂಡರ್ ಯೂಸೂಫ್ ಪಠಾಣ್ ಅವರನ್ನು ಬಿಸಿಸಿಐ ಅಮಾನತುಗೊಳಿಸಿದೆ.
ಕಫ್ ಸೀರಪ್ಗಳಲ್ಲಿ ಪತ್ತೆಯಾಗುವ ನಿಷೇಧಿತ ವಸ್ತುವನ್ನು ಯೂಸೂಫ್ ಪಠಾಣ್ ಅವರು ಅಜಾಗರೂಕತೆಯಿಂದ ಸೇವಿಸಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಅಮಿತಾಭ್ ಚೌಧರಿ ತಮ್ಮ ಹೇಳಿಕೆಯನ್ನು ತಿಳಿಸಿದ್ದಾರೆ.
ಮಾರ್ಚ್ 16 ರಂದು ನವದೆಹಲಿ ನಡೆದ ದೇಶಿಯ ಕ್ರಿಕೆಟ್ ಟೂರ್ನಿ ವೇಳೆ ಬಿಸಿಸಿಐ ಉದ್ದೀಪನಾ ಮದ್ದು ಪರೀಕ್ಷೆ ವೇಳೆ ಪಠಾಣ್ ಅವರ ರಕ್ತ ಹಾಗೂ ಮೂತ್ರದ ಮಾದರಿಯನ್ನು ಪಡೆಯಲಾಗಿತ್ತು. ಅವರ ಮಾದರಿಯಲ್ಲಿ ನಿಷೇಧಿತ ಟೆರ್ಬುಟಲೈನ್ ಎಂಬ ಅಂಶ ಪತ್ತೆಯಾಗಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ವಿಶ್ವ ಉದ್ದೀಪನ ಮದ್ದು ತಡೆ ಘಟಕ(ವಾಡಾ) ನಿಷೇಧಿತ ವಸ್ತುಗಳಲ್ಲಿ ಟೆರ್ಬುಟಲೈನ್ ಔಷಧಿಯು ಸೇರಿರುವ ಕಾರಣ ಈ ಕ್ರಮ ತೆಗೆದುಕೊಳ್ಳಲಾಗಿದೆ.
ಬಿಸಿಸಿಐ ಆ್ಯಂಟಿ ಡೋಪಿಂಗ್ ನಿಯಮಗಳ ಅನುಚ್ಛೇದ 2.1 ರ ಅಡಿಯಲ್ಲಿ ಪಠಾಣ್ ನಿಯಮವನ್ನು ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಬಿಸಿಸಿಐ ಅವರನ್ನು ಅಮಾನತುಗೊಳಿಸಿದೆ. 2017 ರ ಆಕ್ಟೋಬರ್ 27 ರಿಂದ 2018ರ ಜನವರಿ 14ರ ವರೆಗೆ ಈ ನಿಷೇಧ ಅವಧಿ ಇರಲಿದೆ.
ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟನೆ ನೀಡಿರುವ ಯೂಸೂಫ್, ತನಗೆ ನೀಡಬೇಕಾದ ಔಷಧಿಯ ಬದಲು ಅಜಾಗರೂಕತೆಯಿಂದ ಬೇರೆ ಔಷಧಿಯನ್ನು ನೀಡಲಾಗಿದೆ. ಉದ್ದೇಶ ಪೂರ್ವಕವಾಗಿ ಈ ಔಷಧಿಯನ್ನು ಸೇವಿಸಿಲ್ಲ ಎಂದು ತಿಳಿಸಿದ್ದಾರೆ.
ಯೂಸೂಫ್ ಅವರ ವಿವರಣೆಯಿಂದ ತೃಪ್ತಿ ಹೊಂದಿರುವ ಬಿಸಿಸಿಐ, ತಜ್ಞರ ಅಭಿಪ್ರಾಯಗಳನ್ನು ಪಡೆಯುವ ಮೂಲಕ ಯೂಸೂಫ್ ಅವರಿಗೆ 5 ತಿಂಗಳ ಅವಧಿಗೆ ನಿಷೇಧ ಹೇರಿದೆ. ಯೂಸೂಫ್ ಅವರ ಮೇಲಿನ ನಿಷೇಧ ಜನವರಿ 14 ರಂದು ಕೊನೆ ಆಗಲಿರುವ ಕಾರಣ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ.