ಮುಂಬೈ: ತನ್ನ ತಂದೆ ಮೊಬೈಲ್ನಲ್ಲಿ ಗೇಮ್ ಆಡಲು ಬಿಡಲಿಲ್ಲವೆಂದು 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನೆಡೆದಿದೆ.
ಜುಲೈ 27ರಂದು ಸಂಜೆ ಸುಮಾರು 6.30ರ ವೇಳೆ ಪರೇಲ್ ರೈಲ್ವೆ ನಿಲ್ದಾಣದಲ್ಲಿ ಬಾಲಕನೊಬ್ಬ ರೈಲಿನ ಮುಂದೆ ನಡೆದುಕೊಂಡು ಹೋಗುತ್ತಿದ್ದುದನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿಯೊಬ್ಬರು ಗಮನಿಸಿದ್ದರು. ಈ ವೇಳೆ ರೈಲಿನ ಚಾಲಕ ಕೂಡ ಬಾಲಕನನ್ನು ನೋಡಿ ರೈಲನ್ನ ನಿಲ್ಲಿಸಿದ್ರು. ನಂತರ ಸಿಬ್ಬಂದಿ ಬಾಲಕನ ಬಳಿ ಹೋಗಿ ಆತನನ್ನ ದಾದರ್ನ ಆರ್ಪಿಎಫ್ ಕಚೇರಿಗೆ ಕರೆದುಕೊಂಡು ಬಂದ್ರು ಎಂದು ದಾದರ್ ಆರ್ಪಿಎಫ್ನ ಇನ್ಸ್ ಪೆಕ್ಟರ್ ಸತೀಶ್ ಮೆನನ್ ಹೇಳಿದ್ದಾರೆ.
ಭಯದಲ್ಲಿದ್ದ ಬಾಲಕ ತನ್ನ ಬಗ್ಗೆ ಮಾಹಿತಿ ನೀಡಲು ಹಂಜರಿದಿದ್ದ. ತಾನು ಗುಜರಾತ್ನ ಒಬ್ಬ ಅನಾಥ ಎಂದಷ್ಟೇ ಹೇಳುತ್ತಿದ್ದ. ನಂತರ ಆತ ಸೆಲ್ಫೋನ್ ನೋಡಿ ವಿಚಲಿತನಾಗಿದ್ದನ್ನು ನೀತಾ ಮಾಂಜಿ ಎಂಬ ಅಧಿಕಾರಿ ಗಮನಿಸಿದ್ರು. ಇದನ್ನೇ ಬಳಸಿ ಅವರು ಆತನೊಂದಿಗೆ ದೀರ್ಘ ಸಮಯದವರೆಗೆ ಮಾತನಾಡುತ್ತಾ ಎಲ್ಲಾ ವಿವರಗಳನ್ನ ಪಡೆದುಕೊಂಡ್ರು. ಆತ ತನ್ನ ತಂದೆ ತಾಯಿ ಬಗ್ಗೆ ಮಾಹಿತಿ ನೀಡುತ್ತಿದ್ದಂತೆ ಅವರನ್ನ ಕರೆಸಲಾಯ್ತು. ಆಟೋ ಡ್ರೈವರ್ ಆದ ಬಾಲಕನ ತಂದೆ ಕಚೇರಿಗೆ ಬಂದ್ರು ಎಂದು ಅವರು ಹೇಳಿದ್ದಾರೆ.
ನನ್ನ ಮಗನಿಗೆ ಮೊಬೈಲ್ನಲ್ಲಿ ಆಡವಾಡುವುದೆಂದರೆ ಇಷ್ಟ. ಆದ್ರೆ ಮೊಬೈಲ್ ಬಿಟ್ಟು ಓದು ಅಂದ್ರೆ ಕೋಪ ಮಾಡಿಕೊಳ್ತಾನೆ. ಇದೇ ವಿಚಾರದ ಬಗ್ಗೆ ಕೋಪ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದ ಎಂದು ಬಾಲಕನ ತಂದೆ ಹೇಳಿದ್ದಾರೆ.
ಸದ್ಯ ಆರ್ಪಿಎಫ್ ಅಧಿಕಾರಿಗಳು ಬಾಲಕನನ್ನು ಪೋಷಕರಿಗೆ ಒಪ್ಪಿಸಿದ್ದಾರೆ.