ಬೀದರ್: ಕಾರಂಜಾ ಡ್ಯಾಂನಿಂದ ಹರಿಯಬಿಟ್ಟ ನೀರಿನಿಂದ ಭಾಲ್ಕಿ ತಾಲೂಕಿನ ಗೋಧಿಹಿಪ್ಪರಗಾ ಗ್ರಾಮದ ಬಳಿಯ ಬ್ಯಾರೆಜ್ ಕಂ ಬ್ರಿಡ್ಜ್ ಒಡೆದು ನೀರು ಪೋಲಾಗುತ್ತಿದೆ.
ಭಾಲ್ಕಿ ತಾಲೂಕಿನ ಹಾಲಹಳ್ಳಿ ಗ್ರಾಮದ ಬಳಿ ಕಾರಂಜಾ ನದಿಗೆ ಡ್ಯಾಂ ಕಟ್ಟಲಾಗಿದೆ. ಈ ಡ್ಯಾಂನಿಂದ ಪ್ರತಿನಿತ್ಯ 86 ಸಾವಿರ ಕ್ಯೂಸೆಕ್ ನೀರನ್ನು ಹರಿಯಬಿಡಲಾಗುತ್ತಿದೆ. ಆದರೆ ಕೇವಲ 8 ತಿಂಗಳ ಹಿಂದೆ ಗೋಧಿಹಿಪ್ಪರಗಾ ಗ್ರಾಮದಲ್ಲಿ ನಿರ್ಮಾಣ ಮಾಡಿದ್ದ ಬ್ರಿಡ್ಜ್ ಕಂ ಬ್ಯಾರೇಜ್ ನೀರಿನ ರಭಸಕ್ಕೆ ಒಡೆದು ಹೋಗಿದೆ. ಶುಕ್ರವಾರ ರಾತ್ರಿಯಿಂದ ನದಿಗೆ ನೀರನ್ನು ಹರಿಸಲಾಗುತ್ತಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ.
ಮಾಸಿಮಾಡ ಮತ್ತು ಗೋಧಿಹಿಪ್ಪರಗಾ ಗ್ರಾಮದ ನಡುವೆ ಸಂಚಾರ ಕೂಡ ಕಡಿದು ಹೋಗಿದೆ. ಬ್ಯಾರೇಜ್ ಒಡೆದು ಹೋಗಿದ್ದ ಅಧಿಕಾರಿಗಳು ಮಾತ್ರ ನದಿಯ ನೀರನ್ನು ನಿಲ್ಲಿಸುವ ಪ್ರಯತ್ನ ಮಾಡಿಲ್ಲ. ಹತ್ತಾರು ಎಕರೆಯಲ್ಲಿ ರೈತರು ಬೆಳೆದಿದ್ದ ತರಕಾರಿ, ಕಬ್ಬು ನಾಶವಾಗಿವೆ.
ಅವೈಜ್ಞಾನಿಕ ರೀತಿಯಲ್ಲಿ ನೀರು ಬಿಟ್ಟಿರುವುದು ಮತ್ತು ಕಳಪೆ ಗುಣಮಟ್ಟದ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಮಾಡಿದ್ದರಿಂದ ಇಷ್ಟೆಲ್ಲಾ ಅನಾಹುತವಾಗಲು ಕಾರಣ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.