ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಮಂಚನಬೆಲೆ ಗ್ರಾಮದಲ್ಲಿ ಅಸ್ಪೃಶ್ಯತೆ ಇನ್ನೂ ತಾಂಡವಾಡುತ್ತಿದೆ. ಈ ಗ್ರಾಮದ ದಲಿತರಿಗೆ ಕ್ಷೌರ ಮಾಡುವುದಿಲ್ಲ ಹಾಗೂ ಇವರಿಗೆ ದೇವಸ್ಥಾನದ ಪ್ರವೇಶಕ್ಕೂ ನಿರ್ಬಂಧ ಹೇರಲಾಗಿದೆ.
ಒಂದು ವರ್ಷದ ಹಿಂದೆ ಅಂದಿನ ಜಿಲ್ಲಾಧಿಕಾರಿ ಡಾ.ಎಂ.ವಿ ವೆಂಕಟೇಶ್ ಗ್ರಾಮಸ್ಥರ ಜೊತೆ ಶಾಂತಿ ಸಭೆ ನಡೆಸಿ, ದಲಿತರನ್ನ ದೇವಾಲಯಕ್ಕೆ ಪ್ರವೇಶ ಮಾಡಿಸುವುದರ ಮೂಲಕ ಅಸ್ಪೃಶ್ಯತೆಗೆ ಬ್ರೇಕ್ ಹಾಕಿಸುವ ಕೆಲಸ ಮಾಡಿಸಿದ್ದರು. ಆದ್ರೆ ಇದೀಗ ಅಸ್ಪೃಶ್ಯತೆಯ ಕರಿ ನೆರಳು ಮತ್ತೆ ಮರುಕಳುಸಿದ್ದು ಗ್ರಾಮದಲ್ಲಿನ ದಲಿತರಿಗೆ ಕ್ಷೌರ ಮಾಡಲಾಗುತ್ತಿಲ್ಲ.
ಗ್ರಾಮದಲ್ಲಿ ಮೂರು ಕ್ಷೌರದ ಅಂಗಡಿಗಳಿದ್ದು, ದಲಿತರಿಗೆ ಕ್ಷೌರ ಮಾಡಬೇಕಾಗುತ್ತದೆ ಎಂದು ಅಂಗಡಿಗಳನ್ನು ಮುಚ್ಚಲಾಗಿದೆ. ಆದರೆ ಸವರ್ಣಿಯರಿಗೆ ಮಾತ್ರ ಕದ್ದು ಮುಚ್ಚಿ ಕ್ಷೌರ ಮಾಡಲಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ಗ್ರಾಮದ ದಲಿತರು ಚಿಕ್ಕಬಳ್ಳಾಪುರ ನಗರಕ್ಕೆ ಬಂದು ಕ್ಷೌರ ಮಾಡಿಸಿಕೊಂಡು ಹೋಗುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.