ಬೆಂಗಳೂರು: ಬ್ಯಾಂಕ್ ಉದ್ಯೋಗಿಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವಿಜಯನಗರ ಸಮೀಪದ ಪ್ರಶಾಂತ್ ನಗರದಲ್ಲಿ ನಡೆದಿದೆ.
ಹರ್ಷಿತ್ ಶೆಟ್ಟಿ (32)ಆತ್ಮಹತ್ಯೆಗೆ ಶರಣಾದ ದುರ್ದೈವಿ. ತನ್ನನ್ನು ಸಾಕಿ ಸಲಹಿದ್ದ ಸೋದರಿಗೆ ಕ್ಯಾನ್ಸರ್ ಬಂದಿದ್ದರಿಂದ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ಮೃತ ಹರ್ಷಿತ್ ತಾಯಿ 2002ರಲ್ಲಿ, ತಂದೆ 2005ರಲ್ಲಿ ಕ್ಯಾನ್ಸರ್ನಿಂದ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ ಕಾಲೇಜು ಶಿಕ್ಷಣ ಪಡೆಯುತ್ತಿದ್ದ ಹರ್ಷಿತ್, ಬಳಿಕ ಅಕ್ಕ ಆಶಾ ಶೆಟ್ಟಿ ಅವರ ಆಶ್ರಯದಲ್ಲೇ ಬೆಳೆದಿದ್ದರು. ಆದರೆ ಇದೀಗ ಅಕ್ಕನಿಗೂ ಕ್ಯಾನ್ಸರ್ ಬಂದಿದ್ದರಿಂದ ಸಾಕಷ್ಟು ಖಿನ್ನತೆಗೆ ಒಳಗಾಗಿದ್ದ ಹರ್ಷಿತ್ ಮನನೊಂದು ರಾತ್ರಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಕುಂದಾಪುರದ ಹರ್ಷಿತ್, ನಗರದ ದೇವರಬೀಸನಹಳ್ಳಿಯಲ್ಲಿರುವ `ವೆಲ್ಸ್ ಫಾರ್ಗೊ’ ಬ್ಯಾಂಕ್ನಲ್ಲಿ ತಾಂತ್ರಿಕ ತಂಡದ ಲೀಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಮೃತ ಹರ್ಷಿತ್ ಪತ್ನಿ ರಮ್ಯಾ ಶೆಟ್ಟಿ ಹಾಗೂ ಎರಡು ವರ್ಷದ ಮಗುವಿನ ಜೊತೆ ವಿಜಯನಗರ ಸಮೀಪದ ಪ್ರಶಾಂತ್ ನಗರದಲ್ಲಿ ವಾಸವಾಗಿದ್ದರು.
ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.