ರಾಮನಗರ: ನಾಪತ್ತೆಯಾಗಿದ್ದ ಬೆಂಗಳೂರಿನ ಎಂ.ಜಿ ರಸ್ತೆಯ ಕೋಟಕ್ ಮಹಿಂದ್ರಾ ಬ್ಯಾಂಕ್ನ ಡೆಪ್ಯೂಟಿ ಮ್ಯಾನೇಜರ್ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಿ ಗ್ರಾಮದಲ್ಲಿ ನಡೆದಿದೆ.
ಕೋಟಕ್ ಮಹಿಂದ್ರ ಬ್ಯಾಂಕ್ ನ ಡೆಪ್ಯೂಟಿ ಮ್ಯಾನೇಜರ್ ಅನಿಲ್(29) ಕೊಲೆಯಾಗಿರುವ ವ್ಯಕ್ತಿ. ದುಷ್ಕರ್ಮಿಗಳು ತಲೆಗೆ ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿದ್ದಾರೆ. ಬೆಂಗಳೂರಿನ ಬನಶಂಕರಿ ಸಮೀಪದ ಭುವನೇಶ್ವರಿನಗರದ ನಿವಾಸಿಯಾಗಿದ್ದ ಅನಿಲ್ ಅವರ ಶವ ಉತ್ತರಿ ಗ್ರಾಮದ ಸ್ಮಶಾನದಲ್ಲಿ ಪತ್ತೆಯಾಗಿದೆ. ಬೇರೆಡೆ ಹತ್ಯೆ ಮಾಡಿ ಶವವನ್ನು ತಂದು ಬಿಸಾಕಿರುವ ಶಂಕೆ ವ್ಯಕ್ತವಾಗಿದೆ.
ಎರಡು ದಿನಗಳಿಂದ ಅನಿಲ್ ನಾಪತ್ತೆಯಾಗಿದ್ದರು. ಈ ಸಂಬಂಧ ಚನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ದೂರು ಸಹ ದಾಖಲಾಗಿತ್ತು. ಇನ್ನೆರಡು ತಿಂಗಳಲ್ಲಿ ಅನಿಲ್ ಮದುವೆ ಸಹ ನಿಶ್ಚಯವಾಗಿತ್ತು. ಆದರೆ ಇದೀಗ ಅನಿಲ್ ಶವ ಸ್ಮಶಾನದಲ್ಲಿ ಸಿಕ್ಕಿದೆ.
ಘಟನೆ ಸಂಬಂಧ ಕಗ್ಗಲಿಪುರ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.