ಮೈಸೂರು: ಮುಸ್ಲಿಮರ ಪವಿತ್ರ ಗ್ರಂಥ ಕುರಾನ್ ನ ಪ್ರತಿಗಳನ್ನು ಹರಿದು ಅದರಲ್ಲಿ ರಾಷ್ಟ್ರೀಕೃತ ಬ್ಯಾಂಕಿನ ಚಲನ್ ಮುದ್ರಿಸಿರುವ ಪ್ರಕರಣ ಮೈಸೂರಿನಲ್ಲಿ ನಡೆದಿದೆ. ಮೈಸೂರಿನ ಕೆ.ಆರ್.ಮೊಹಲ್ಲಾದ ಶಿವಾಜಿ ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಶಾಖೆಯಲ್ಲಿ ಇಂತಹ ಚಾಲನ್ ಪ್ರತಿಗಳು ಲಭ್ಯವಾಗಿವೆ.
ಕುರಾನ್ ಹಾಳೆಗಳ ಒಂದು ಭಾಗ ಖಾಲಿ ಇರುತ್ತೆ. ಆ ಹಾಳೆ ಕತ್ತರಿಸಿ ಅದರಲ್ಲಿ ಬ್ಯಾಂಕ್ ಚಾಲನ್ ಮುದ್ರಿಸಿರುವ ಘಟನೆ ನಡೆದಿದೆ. ಹಣ ತುಂಬುವ ಚಲನ್ಗಳ ಹಿಂಭಾಗ ಪವಿತ್ರ ಖುರಾನ್ ನ ಸಂದೇಶಗಳ ಪ್ರಿಂಟ್ ಇರುವುದು ಕಂಡ ಮುಸ್ಲಿಂ ಸಮುದಾಯದ ಜನ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎನ್.ಆರ್.ಠಾಣೆಯ ಇನ್ಸ್ ಪೆಕ್ಟರ್ ಸಂತೋಷ್ ಬ್ಯಾಂಕ್ ನ ಸಿಬ್ಬಂದಿಯನ್ನು ವಿಚಾರಣೆ ನಡೆಸಿ ಚಲನ್ ಗಳನ್ನ ಒದಗಿಸಿದ ನವೀನ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮುದ್ರಣಕ್ಕೆ ಬಳಸುವ ಹಾಳೆಯ ವೆಚ್ಚ ಉಳಿಸಲು ನವೀನ್ ಹೀಗೆ ಕುರಾನ್ ಪ್ರತಿಗಳನ್ನು ಹರಿದು ಅದರಲ್ಲೇ ಬ್ಯಾಂಕ್ ಚಲನ್ ಮುದ್ರಿಸಿದ್ದಾನೆ ಎಂದು ಹೇಳಲಾಗಿದೆ.
ಇದು ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ಕೃತ್ಯವೆಂದು ಆರೋಪಿಸಿದ ಕೆಲ ಯುವಕರು ಬ್ಯಾಂಕಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.