ಬೆಂಗಳೂರು: ಒಳಚರಂಡಿ ಪೈಪ್ಲೈನ್ ಒಡೆದು ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿದ್ದು. ಈ ನೀರನ್ನು ಸೇವಿಸಿರುವ 60ಕ್ಕೂ ಹೆಚ್ಚು ಜನರು ಆನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ನ 10 ಕ್ರಾಸ್ನಲ್ಲಿ ನಡೆದಿದೆ.
ಕಳೆದ ಮೂರು ದಿನಗಳಿಂದ ಲೇಔಟ್ನ 5ನೇ ಕ್ರಾಸ್ನಲ್ಲಿ ಒಳಚರಂಡಿ ಪೈಪ್ಲೈನ್ ಒಡೆದು ಹೋಗಿದ್ದು, ಮನೆಗಳಿಗೆ ಬರುವ ಕುಡಿಯುವ ನೀರಿಗೆ ಕಲುಷಿತ ನೀರು ಮಿಶ್ರಣವಾಗಿ ಬರುತ್ತಿದೆ. ಪೈಪ್ ಸರಿಪಡಿಸಲು ಬಿಬಿಎಂಪಿ ಅಧಿಕಾರಿಗಳಿಗೆ ತಿಳಿಸಿದರು ಯಾವುದೇ ಪ್ರಯೋಜನವಿಲ್ಲ ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಕಲುಷಿತ ನೀರನ್ನು ಕುಡಿದ ಜನರು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಿದ್ದು, ವಾಂತಿ, ಭೇದಿ, ಜ್ವರದಿಂದ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಯಾವುದೇ ಅಧಿಕಾರಿಗಳು ಇದರ ಬಗ್ಗೆ ಗಮನ ನೀಡುತ್ತಿಲ್ಲ. ಇನ್ನೂ ಇದೇ ನೀರನ್ನು ಸ್ನಾನಕ್ಕೆ ಬಳಸಲು ಸಾಧ್ಯವಿಲ್ಲದಷ್ಟು ಕೆಟ್ಟ ವಾಸನೆ ಬರುತ್ತಿದೆ. ಏರಿಯಾದ ಎಲ್ಲಾ ಮಕ್ಕಳ ಆರೋಗ್ಯ ಮೇಲು ಕೆಟ್ಟ ಪರಿಣಾಮ ಬೀರಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದು ರಾಜ್ಯದ ಗೃಹ ಸಚಿವರ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರದೇಶವಾಗಿದೆ. ಪ್ರಸ್ತುತ ಇದುವರೆಗೂ ಕಲುಷಿತ ನೀರು ಸೇವಿಸಿ 60 ಕ್ಕೂ ಹೆಚ್ಚು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೀಗಿದ್ದರು ಒಮ್ಮೆಯೂ ಬಿಡಬ್ಲ್ಯೂಎಸ್ಎಸ್ಪಿ ಭೇಟಿ ಕೊಟ್ಟಿಲ್ಲ. ಜಲಮಂಡಳಿಯವರು ಈ ಪೈಪ್ ಲೈನ್ ಸರಿಪಡಿಸುವ ಗೋಜಿಗೆ ಹೋಗಿಲ್ಲ. ಒಟ್ಟಾರೆ ರಾಜ್ಯದ ಗೃಹ ಸಚಿವರ ಕ್ಷೇತ್ರದ ಜನರು ಕಲುಷಿತ ನೀರು ಕುಡಿದು ಅನುಭವಿಸುತ್ತಿರುವ ಕಷ್ಟಗಳಿಗೆ ಅಧಿಕಾರಿಗಳು ಅದಷ್ಟು ಬೇಗ ಪರಿಹಾರ ನೀಡಬೇಕಿದೆ.