ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳದ ಗೊಮ್ಮಟೇಶ್ವರನಿಗೆ ನಡೀತಿರೋ 88ನೇ ಮಹಾಮಸ್ತಕಾಭಿಷೇಕ ಕಾರ್ಯಕ್ರಮದಲ್ಲಿ ಇವತ್ತು ಮಹಾಮಜ್ಜನ ನಡೀತು. ವಿವಿಧ ಅಭಿಷೇಕಗಳಿಂದ ಬಾಹುಬಲಿಯನ್ನ ಪೂಜಿಸಲಾಯ್ತು. ಹಾಸನದ ಶ್ರವಣಬೆಳಗೊಳದ ವಿಂದ್ಯಗಿರಿಯಲ್ಲಿರೋ ಐತಿಹಾಸಿಕ ಏಕಶಿಲಾ ಬಾಹುಬಲಿಗೆ ವೈಭವೋಪೇತವಾಗಿ ಮಹಾಮಸ್ತಕಾಭಿಷೇಕ ನಡೆಸಲಾಯಿತು. ಮುಂಜಾನೆ ಬೆಳಗ್ಗೆ 5ಗಂಟೆಯಿಂದಲೇ ಪೂಜಾವಿಧಿ ವಿಧಾನಗಳು ಆರಂಭವಾದವು. ಬೆಳಕು ಹರಿದಂತೆಲ್ಲಾ ಭಕ್ತ ಸಮೂಹ ವಿಂದ್ಯಗಿರಿ ವಿರಾಗಿಯನ್ನ ಕಣ್ಮನ ತುಂಬಿಕೊಳ್ಳಲು ಆಗಮಿಸಿತು.
ಮಧ್ಯಾಹ್ನ 2 ಗಂಟೆ ಸುಮಾರಿಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿ, 6 ಬಾರಿ ಕಳಶಾಭಿಷೇಕ ಮಾಡಿದ್ರು. ಸಚಿವರಾದ ಎ.ಮಂಜು, ಉಮಾಶ್ರೀ, ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ, ಚಾರುಕೀರ್ತಿ ಭಟ್ಟಾರಕಶ್ರೀಗಳು, ಜೈನಮುನಿಗಳು ಉಪಸ್ಥಿತರಿದ್ದರು. ಮಹಾಮಸ್ತಕಾಭಿಷೇಕದ ಆರಂಭದ ದಿನವಾದ ಇವತ್ತು 108 ಕಳಶಾಭಿಷೇಕ ನಡೀತು. 21 ಬಗೆಯ ಅಷ್ಟ ದ್ರವ್ಯಗಳ ಅಭಿಷೇಕ. ಜಲಾಭಿಷೇಕ, ಕ್ಷೀರಾಭಿಷೇಕ, ಕಬ್ಬಿನ ರಸ, ಗಂಧ, ಕೇಸರಿ, ಎಳನೀರಿನ ಪರಿಷೇಕ ನಡೆಯಿತು.
ಈ ಎಲ್ಲಾ ಅಭಿಷೇಕ ಪ್ರಾಕಾರದಲ್ಲೂ ಭಗವಾನ್ ಬಾಹುಬಲಿಯ ಮೂರ್ತಿ ಆಕರ್ಷಕವಾಗಿ ಕಾಣುತ್ತಿತ್ತು. 12 ವರ್ಷಕ್ಕೊಮ್ಮೆ ಕಾಣಸಿಗುವ ಈ ನಯನ ಮನೋಹರ ದಿವ್ಯ ದೃಶ್ಯವನ್ನ ಸಾವಿರಾರು ಭಕ್ತರು, ಜೈನ ಮುನಿಗಳು, ಮಾತಾಜಿಗಳು. ಪ್ರವಾಸಿಗರು ಬಿಸಿಲನ್ನೂ ಲೆಕ್ಕಿಸದೆ ಭಕ್ತರು ಕಣ್ತುಂಬಿಕೊಂಡರು. ಮೈಸೂರಿನಿಂದ ರಕ್ತಚಂದನ, ಬೆಂಗಳೂರಿನಿಂದ ಶ್ರೀಗಂಧ, ಮದ್ದೂರು ಎಪಿಎಂಸಿಯಿಂದ 2,500 ಎಳನೀರು, ಆಂಧ್ರಪ್ರದೇಶ, ತಮಿಳುನಾಡಿನಿಂದ 53 ಬಗೆಯ ಬಣ್ಣದ ಹೂಗಳು, ಕನಕಾಂಬರ, ಮೈಸೂರು ಮಲ್ಲಿಗೆ, ಗುಲಾಬಿ, ಕಾಕಡ ಸಂಪಿಗೆ ಮೂಲಕ ಪುಷ್ಪವೃಷ್ಟಿ 250 ಕೆಜಿ ಪುಷ್ಪವೃಷ್ಟಿ ಆಯ್ತು.
ಮಹಾಮಸ್ತಕಾಭಿಷೇದ ಮೊದಲ ಕಳಶವನ್ನ ರಾಜಸ್ಥಾನ ಮೂಲದ ಅಶೋಕ್ ಪಾಟ್ನಿ ಕುಟುಂಬದಿಂದ 11.61 ಕೋಟಿಗೆ ಖರೀದಿಸಿತ್ತು. ಸಂಜೆ 6-30ರಿಂದ ಸಾರ್ವಜನಿಕರಿಗೆ ದರ್ಶನ ಅವಕಾಶ ಕೊಡಲಾಗಿತ್ತು.
ಫೆಬ್ರವರಿ 27ರವರೆಗೆ ನಿತ್ಯ ಮಹಾಮಸ್ತಕಾಭಿಷೇಕ ನಡೆಯಲಿದ್ದು, ನಾಳೆಯಿಂದ ಪ್ರತಿದಿನ 1008 ಕಲಶಾಭಿಷೇಕ ಮತ್ತು ಅಷ್ಟ ದ್ರವ್ಯಗಳ ಅಭಿಷೇಕ ನಡೆಯಲಿದೆ. ನಾಳೆ ಮಧ್ಯಾಹ್ನ 2 ಗಂಟೆಯಿಂದ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಸಿಗಲಿದೆ. 2006ರಲ್ಲಿ ಈ ಹಿಂದೆ ನಡೆದಿದ್ದ ಗೊಮ್ಮಟ ಮಹೋತ್ಸವಕ್ಕೂ ಈ ಬಾರಿಯ ಉತ್ಸವಕ್ಕೂ ಭಕ್ತರ ಸಂಖ್ಯೆ ದುಪ್ಪಟ್ಟಾಗಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಕಲ ಕ್ರಮ ಕೈಗೊಂಡಿದೆ.