ಬಾಗಲಕೋಟೆ: ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಗರದ ಬಸವೇಶ್ವರ ವಿದ್ಯಾವರ್ಧಕ ಸಂಘದ, ನಾಗಲಾಂಭಿಕ ವಸತಿ ನಿಲಯದಲ್ಲಿ ನಡೆದಿದೆ.
ಅಕ್ಷತಾ ಕಬ್ಬಲಗೇರಿ ಆತ್ಮಹತ್ಯೆಗೆ ಶರಣಾದ ಯುವತಿ. ಅಕ್ಷತಾ ನಗರದ ಬಸವೇಶ್ವರ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿಎಸ್ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು.
ಗುರುವಾರ ಸಂಜೆ ಕಾಲೇಜಿನಿಂದ ಹಾಸ್ಟೇಲ್ಗೆ ಬಂದ ಅಕ್ಷತಾ ತನ್ನ ರೂಮ್ ಮೇಟ್ಗಳಿಗೆ ತಾನು ಕೆಲ ಸಮಯ ಧ್ಯಾನ ಮಾಡ್ತೇನೆ ಎಂದು ಹೇಳಿ 6.30ರ ಸಮಯಕ್ಕೆ ಒಳಗೆ ಹೋಗಿದ್ದರು. ಆದ್ರೆ 8.30ಕ್ಕೆ ಗೆಳತಿಯರು ಬಂದಾಗ ಆಕೆ ಬಾಗಿಲು ತೆಗೆದಿರಲಿಲ್ಲ. ನಂತರ ಬಾಗಿಲನ್ನ ಜೋರಾಗಿ ತಳ್ಳಿದ್ದು, ಒಳಗಿನ ಚಿಲಕ ಓಪನ್ ಆಗಿದೆ. ಒಳಹೋಗಿ ನೋಡಿದಾಗ ಅಕ್ಷತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ ಎಂದು ಕಾಲೇಜಿನ ಪ್ರಾಚಾರ್ಯರಾದ ರಾಘವೇಂದ್ರ ಪತ್ತೇಪುರ ಹೇಳಿದ್ದಾರೆ.
ರೂಮಿನಲ್ಲಿ ಡೆತ್ನೋಟ್ ಪತ್ತೆಯಾಗಿದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ಪರೀಕ್ಷೆಯಲ್ಲಿ ತಂದೆಯವರ ನಿರೀಕ್ಷೆಯಂತೆ ಅಂಕಗಳನ್ನು ಪಡೆಯಲು ನನ್ನಿಂದ ಆಗಲಿಲ್ಲ. ಪಪ್ಪಾ, ಮಮ್ಮಿ, ಅಣ್ಣಾ ನನ್ನನ್ನು ಕ್ಷಮಿಸಿ ಎಂದು ಡೆತ್ ನೋಟ್ನಲ್ಲಿ ಬರೆಯಲಾಗಿದೆ.
ಈ ಸಂಬಂಧ ಬಾಗಲಕೋಟೆ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.