ಬಾಗಲಕೋಟೆ: ಶಾಸಕರ ಮನೆ ಎದುರೇ ಮಹಿಳೆಯೊಬ್ಬರು ವಿಷಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಬಾದಾಮಿ ಪಟ್ಟಣದಲ್ಲಿ ನಡೆದಿದೆ.
ಬಾದಾಮಿ ತಾಲೂಕು ಯರಗೊಪ್ಪ ಗ್ರಾಮದ ನಿವಾಸಿಶಾಂತವ್ವ ವಾಲಿಕಾರ (46) ಎಂಬುವರೇ ವಿಷ ಸೇವಿಸಿ ಮೃತಪಟ್ಟ ಮಹಿಳೆ. ಶಾಂತವ್ವರ ಸಾವಿಗೆ ಶಾಸಕ ಚಿಮ್ಮನಕಟ್ಟಿಯವರೇ ಕಾರಣ ಎಂದು ಆರೋಪಿಸುವ ಕುಟುಂಬಸ್ಥರು ಶಾಸಕರ ಮನೆಯ ಎದುರು ಧರಣಿ ನಡೆಸಿದ್ದಾರೆ.
ಈ ವೇಳೆ ಪ್ರತಿಭಟನಾ ನಿರತರು ಶಾಸಕ ಚಿಮ್ಮನಕಟ್ಟಿ ಭಾವಚಿತ್ರವಿರುವ ಫ್ಲೆಕ್ಸ್ ಕಿತ್ತು ಹಾಕಲು ಮುಂದಾಗಿದ್ದು, ಇದರಿಂದ ಶಾಸಕರ ಬೆಂಬಲಿಗರು ಹಾಗೂ ಪ್ರತಿಭಟನಾಕಾರ ನಡುವೆ ವಾಗ್ದಾದಕ್ಕೆ ಕಾರಣವಾಯಿತು. ಪ್ರತಿಭಟನಾಕಾರರು ಶಾಸಕರ ಬೆಂಬಲಿಗನ ಮೇಲೆ ಹಲ್ಲೆ ನಡೆಸಿದ ಘಟನೆಯೂ ನಡೆಯಿತು.
ಏನಿದು ಘಟನೆ: ಮೂರು ವರ್ಷದ ಹಿಂದೆ ಮೃತ ಶಾಂತವ್ವ ಅವರ ಪತಿ ಗೋವಿಂದಪ್ಪ ವಾಲಿಕಾರ ನಿಧನರಾಗಿದ್ದರು. ಗೋವಿಂದಪ್ಪ ಅವರು ಮುತ್ತಲಗೇರಿ ಗ್ರಾಮ ಪಂಚಾಯತಿಯಲ್ಲಿ ಗ್ರಾಮಸೇವಕ ಕೆಲಸ ನಿರ್ವಹಿಸುತ್ತಿದ್ದರು. ಪತಿಯ ಮರಣದ ನಂತರ ಅನುಕಂಪಕದ ಆಧಾರದ ಮೇಲೆ ಆ ಕೆಲಸವನ್ನು ತಮ್ಮ ಮಗನಿಗೆ ನೀಡಿ ಎಂದು ಶಾಸಕ ಬಿ.ಬಿ.ಚಿಮ್ಮನಕಟ್ಟಿ ಸೇರಿದಂತೆ ಅಧಿಕಾರಿಗಳ ಬಳಿ ಶಾಂತವ್ವ ಮನವಿ ಮಾಡಿಕೊಂಡಿದ್ದರು.
ಶಾಸಕರ ಹೇಳಿಕೆ ಮೇರೆಗೆ ಸ್ವಜಾತಿಯವರಿಗೆ ಗ್ರಾಮಸೇವಕ ಕೆಲಸ ನೀಡಲಾಗಿದೆ ಎನ್ನುವ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಮನನೊಂದ ಶಾಂತವ್ವ ಶಾಸಕರ ಮನೆಯ ಎದುರೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಬಾಗಲಕೋಟೆ ಉಪವಿಭಾಗಾಧಿಕಾರಿ ಜಯಾ ಭೇಟಿ ನೀಡಿ ಧರಣಿ ನಿರತರ ಅಹವಾಲು ಸ್ವೀಕರಿಸಿದರು. ಘಟನೆಯಿಂದ ನಗರದಾದ್ಯಂತ ರಸ್ತೆ ಸಂಚಾರ ಸಂಪೂರ್ಣ ಬಂದ್ ಮಾಡಲಾಗಿತ್ತು.
https://www.youtube.com/watch?v=7jMD7P6juBM