ದುಬೈ: ರಾಜೇಶ್ ವೇಣೂರು ನಿರ್ದೇಶನದಲ್ಲಿ ಅಶ್ವಿನ್ ಪಿರೇರಾ ನಿರ್ಮಿಸುತ್ತಿರುವ ‘ಅಸತೋಮ ಸದ್ಗಮಯ’ ಚಿತ್ರದ ಟ್ರೇಲರ್ ಮಾರ್ಚ್ 23ರಂದು ದುಬೈನ್ ಹೋಟೇಲ್ ಫಾರ್ಚೂನ್ ಪ್ಲಾಜಾದಲ್ಲಿ ಬಿಡುಗಡೆಗೊಂಡಿತು. ಫಾರ್ಚೂನ್ ಗ್ರೂಪ್ ಆಫ್ ಹೋಟೆಲ್ಸ್ ನ ಮಾಲಕರಾದ ಪ್ರವೀಣ್ ಶೆಟ್ಟಿಯವರು ಈ ಟ್ರೇಲರನ್ನು ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಅವರು, ಕನ್ನಡದ ಚಿತ್ರವನ್ನು ದುಬೈಗೆ ತಂದು ಟ್ರೇಲರ್ ರಿಲೀಸ್ ಮಾಡ್ತಾ ಇರೋದು ಕನ್ನಡಿಗರಾದ ನಮಗೆಲ್ಲರಿಗೂ ತುಂಬಾ ಸಂತೋಷದ ವಿಚಾರ. ಈ ಚಿತ್ರ ಮನರಂಜನೆ ಜೊತೆಗೆ ಉತ್ತಮ ಮೆಸೇಜ್ ಇರುವಂತಹ ಚಿತ್ರ ಎಂದು ಟ್ರೇಲರ್ ನೋಡುವಾಗ ಅರ್ಥವಾಗುತ್ತದೆ. ಈ ಚಿತ್ರ ಯಶಸ್ವಿಯಾಗಿ, ಕರ್ನಾಟಕದಾದ್ಯಂತ ಮನೆ ಮಾತಾಗಲಿ ಎಂದು ಹಾರೈಸಿದರು.
ನಂತರ ಮಾತನಾಡಿದ ಜೈನ್ ಮಿಲನ್ ಅಧ್ಯಕ್ಷರಾದ ದೇವ್ ಕುಮಾರ್ ಕಾಂಬ್ಳಿಯವರು, ಚಿತ್ರದ ಹೆಸರು ತುಂಬಾ ಅರ್ಥಗರ್ಭಿತವಾಗಿದೆ, ಟ್ರೇಲರ್ ನೋಡುವಾಗ ಇದರಲ್ಲಿ ಸರ್ಕಾರಿ ಶಾಲೆಗಳ ಅವನತಿ ಬಗ್ಗೆ ಪ್ರಸ್ತಾಪವಿರುವುದು ಗೋಚರಿಸುತ್ತದೆ, ನಾನು ಕೂಡಾ ಸರ್ಕಾರಿ ಶಾಲೆಯಲ್ಲೇ ಓದಿರೋನು, ಆದರೆ ದೇವರು ನನಗೆ ಯಾವುದರಲ್ಲೂ ಕಮ್ಮಿ ಮಾಡಿಲ್ಲ, ಈ ಚಿತ್ರ ಯಶಸ್ವಿಯಾಗಿ ನೂರು ದಿನ ಪೂರೈಸಲಿ ಎಂದು ಶುಭ ಹಾರೈಸಿದರು.
ಅರುಣ್ ಮುತುಗಡೂರ್ ಮಾತನಾಡಿ, ‘ಅಸತೋಮ ಸದ್ಗಮಯ’ ಎನ್ನುವ ಶಬ್ದ ಕೇಳುವಾಗಲೇ ನಮ್ಮ ನೆನಪು ಶಾಲಾ ದಿನಗಳೆಡೆಗೆ ಜಾರುತ್ತದೆ. ಯಾಕೆಂದರೆ ಓದುವಾಗ ನಮ್ಮ ದಿನಚರಿ ಪ್ರಾರಂಭವಾಗುತ್ತಿದ್ದದ್ದೇ ಅಸತೋಮ ಸದ್ಗಮಯ ಮಂತ್ರದಿಂದ, ಈ ಚಿತ್ರದಲ್ಲಿ ಕೂಡ ಸರ್ಕಾರಿ ಶಾಲೆಯ ಪ್ರಸ್ತಾಪವಿರುವುದರಿಂದ, ಈ ಟೈಟಲ್ ಸೂಕ್ತವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕೆಸಿವೊ ಅಧ್ಯಕ್ಷರಾದ ಹಾಗೂ ನ್ಯೂಸ್ ಕರ್ನಾಟಕ ಸಲಹೆಗಾರರಾದ ವಲೇರಿಯನ್ ಅಲ್ಮೇಡ, ಉದ್ಯಮಿ ಜೋಸೆಫ್ ಮಥಾಯಸ್, ಸಂಧ್ಯಾ ಕ್ರಿಯೇಶನ್ಸ್ ಶೋದನ್ ಪ್ರಸಾದ್ ಅತಿಥಿಗಳಾಗಿ ಬಾಗವಹಿಸಿದ್ದರು.
ಚಿತ್ರದ ನಿರ್ಮಾಪಕರಾದ ಅಶ್ವಿನ್ ಪಿರೇರಾ ಮಾತನಾಡಿ, ಕನ್ನಡ ಚಿತ್ರಗಳಾಗಲೀ ಅಥವಾ ಯಾವುದೇ ಕನ್ನಡ ಕಾರ್ಯಕ್ರಮಗಳಿಗೆ ನೀವು ನೀಡಿದ ಪ್ರೋತ್ಸಾಹ, ನಮ್ಮನ್ನು ಟ್ರೇಲರ್ ಬಿಡುಗಡೆಗೆ ಇಲ್ಲಿಯ ತನಕ ಕರೆದುಕೊಂಡು ಬಂದಿದೆ. ನಮ್ಮ ಚಿತ್ರಕ್ಕೂ ಇದೇ ತರಹ ಪ್ರೋತ್ಸಾಹ ನೀಡಬೇಕೆಂದು ಕೇಳಿಕೊಂಡರು. ಆರತಿ ಅಡಿಗ ಕಾರ್ಯಕ್ರಮ ನಿರ್ವಹಣೆ ಮಾಡಿದರು.