ಹಾವೇರಿ: ನಗರದ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಘಟಕವು 2016-17 ನೇ ಶೈಕ್ಷಣಿಕ ವರ್ಷದ ವಾರ್ಷಿಕ ವಿಶೇಷ ಶಿಬಿರವನ್ನು ತಾಲೂಕಿನ ನೆಲೋಗಲ್ಲ ಗ್ರಾಮದಲ್ಲಿ ಆಯೋಜಿಸಿತ್ತು.
ರಾಜ್ಯದ ಜವಳಿ ಮತ್ತು ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ಎನ್ಎಸ್ಎಸ್ ಶಿಬಿರವನ್ನು ಉದ್ಘಾಟಿಸಿದರು. ಇದೇ ವೇಳೆ ಮಾತನಾಡಿದ ಅವರು, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಗಳಿಂದ ಗ್ರಾಮ ಜಾಗೃತಿ ಸಾಧ್ಯವಾಗುತ್ತದೆ. ಜನರಲ್ಲಿ ಅರಿವು ಮತ್ತು ವಾಸ್ತವ ಪ್ರಜ್ಞೆ ಮೂಡಲು ಸಹಕಾರಿಯಾಗುತ್ತದೆ. ಇಂದು ನೀರಿನ ಅಭಾವ ಎಲ್ಲೆಡೆಗೂ ಹೆಚ್ಚಾಗುತ್ತಿದ್ದು, ನೀರನ್ನು ಮಿತವಾಗಿ ಬಳಸುವ ಕಾರ್ಯವಾಗಬೇಕಿದೆ. ಅಂತರ್ಜಲ ಮಟ್ಟವನ್ನು ಹೆಚ್ಚಿಸುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಪಿ.ಡಿ.ಶಿರೂರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪ್ರಾಚಾರ್ಯ ಪ್ರೊ. ಎಸ್.ಬಿ.ನಾಡಗೌಡ, ಪ.ಪೂ. ಪ್ರಾಚಾರ್ಯ ಡಾ. ಸಿ.ಮಲ್ಲಣ್ಣ, ಪ್ರೊ. ಡಿ.ಎ.ಕೊಲ್ಹಾಪುರೆ, ಡಾ. ಜೆ.ಎಫ್.ಹೊಸಮನಿ, ಪ್ರೊ. ನಾಗರಾಜ ಮುಚ್ಚಟ್ಟಿ ಹಾಗೂ ಗ್ರಾಮದ ಗುರುಹಿರಿಯರು ಪಾಲ್ಗೊಂಡಿದ್ದರು.
ಆರಂಭದಲ್ಲಿ ಶಿಬಿರಾರ್ಥಿ ನವೀನಕುಮಾರ ಸಾಸನೂರ ಪ್ರಾರ್ಥಿಸಿದರು. ಪ್ರೊ. ರಮೇಶ ನಾಯ್ಕ್ ಸ್ವಾಗತಿಸಿದರು. ಪ್ರೊ. ಸಿದ್ಧೇಶ್ವರಯ್ಯ ಹುಣಶೀಕಟ್ಟಿಮಠ ಕಾರ್ಯಕ್ರಮ ನಿರ್ವಹಿಸಿದರು. ಪ್ರೊ. ಎಸ್.ಎಸ್. ಸಣ್ಣಶಿವಣ್ಣನವರ ವಂದಿಸಿದರು.