ಬೆಂಗಳೂರು: ಅನ್ನಭಾಗ್ಯ ಯೋಜನೆ ಅಡಿಯಲ್ಲಿ 5 ಕೆ.ಜಿ ವಿತರಣೆ ಮಾಡುತ್ತಿದ್ದ ಅಕ್ಕಿಯನ್ನು 7ಕೆ.ಜಿಗೆ ಹೆಚ್ಚಳ ಮಾಡಿದ್ದೇವೆ. ಈ ವ್ಯವಸ್ಥೆ ಏಪ್ರಿಲ್ 1ರಿಂದ ರಾಜ್ಯಾದ್ಯಂತ ಜಾರಿಯಾಗಲಿದೆ ಅಂತಾ ಆಹಾರ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.
ಇಂದು ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಡಿತರ ವಿತರಣೆ ಪ್ರತಿ ತಿಂಗಳು 1 ರಿಂದ 15ರೊಳಗೆ ಮಾಡಬೇಕು. ಈ ಹಿಂದೆ ಪಡಿತರವನ್ನು ಪಡೆಯಲು 30 ತಾರೀಕಿನವರೆಗೆ ಅವಕಾಶ ನೀಡಲಾಗಿತ್ತು. ಇದ್ರಿಂದ ಅಂಗಡಿಯವರು ಕ್ಲೋಸಿಂಗ್ ಬ್ಯಾಲೆನ್ಸ್ ಕೊಡುತ್ತಿರಲಿಲ್ಲ. ಹೀಗಾಗಿ ಇನ್ಮುಂದೆ ಜನರು ಪ್ರತಿ ತಿಂಗಳು 15ನೇ ತಾರೀಕಿನೊಳಗೆ ಪಡಿತರ ಪಡೆಯಬೇಕು ಅಂತಾ ಖಾದರ್ ಹೇಳಿದ್ದಾರೆ.
ಇಂದಿರಾ ಕ್ಯಾಂಟಿನ್ ಈ ವಿಚಾರಕ್ಕೆ ಸಂಬಂಧಿಸಿದಂತೆ ಇಸ್ಕಾನ್ ಜೊತೆ ಇನ್ನೂ ಒಪ್ಪಂದ ಆಗಿಲ್ಲ. ವಾರ್ಷಿಕವಾಗಿ ಅಂದಾಜು ನೂರು ಕೋಟಿ ಸರ್ಕಾರಕ್ಕೆ ಹೊರೆಯಾಗುತ್ತದೆ. ಪ್ರಥಮ ಹಂತದಲ್ಲಿ ಒಂದು ಕ್ಯಾಂಟೀನ್ ನಲ್ಲಿ 250 ಜನರಿಗೆ ಮಾತ್ರ ಊಟ, ತಿಂಡಿ ಲಭ್ಯವಾಗುವುದು ಅಂತಾ ಅಂದ್ರು.
ಇಸ್ಕಾನ್ ಜೊತೆ ಒಪ್ಪಂದ ಇಲ್ಲ: ಇಂದಿರಾ ಕ್ಯಾಂಟೀನ್ ನಿರ್ವಹಣೆಗೆ ಇಸ್ಕಾನ್ಗೆ ಗುತ್ತಿಗೆ ನೀಡಲು ಶಾಸಕರು ವಿರೋಧಿಸಿದ್ದಾರೆ. ಇಸ್ಕಾನ್ ನವರು ಈರುಳ್ಳಿ, ಬೆಳ್ಳುಳ್ಳಿ ಬಳಸಲ್ಲ. ಆದ್ರೆ ಸರ್ಕಾರ ಮಾತ್ರ ಈರುಳ್ಳಿ, ಬೆಳ್ಳುಳ್ಳಿ ಬಳಸಬೇಕೆಂದು ಪಟ್ಟು ಹಿಡಿದಿದೆ. 3 ಗಂಟೆ ಮೊದಲು ಆಹಾರ ತಯಾರಿಸಲಾಗುತ್ತದೆ ಅಂತಾ ಇಸ್ಕಾನ್ ನವರು ಹೇಳಿದ್ದಾರೆ. ಹೀಗಾಗಿ ಒಂದು ಕೇಂದ್ರೀಕೃತ ಅಡುಗೆ ಮನೆಗೆ ಬದಲು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಅಡುಗೆ ಮನೆ ನಿರ್ಮಾಣಕ್ಕೆ ಟೆಂಡರ್ ಕರೆಯಲು ಉದ್ದೇಶಿಸಿದ್ದೇವೆ. ಇನ್ನು ಈ ಬಗ್ಗೆ ಹೋಟೆಲ್ ಉದ್ಯಮಿಗಳ ಜತೆ ಮಾತುಕತೆ ನಡೆಸಿದ್ದೇವೆ ಅಂತಾ ನುಡಿದ್ರು.
ರಾಂಗ್ ಹೇಳಿಕೆ: ಗುಂಡ್ಲುಪೇಟೆ ಹಾಗೂ ನಂಜನಗೂಡು ಉಪಚುನಾವಣೆಯಲ್ಲಿ ಒಂದು ಮತಕ್ಕೆ ಕಾಂಗ್ರೆಸ್ ಅವರು ನಾಲ್ಕು ಸಾವಿರ ಕೊಡುತ್ತಿದ್ದಾರಂತೆ. ಅವರ ಹತ್ತಿರ ದುಡ್ಡನ್ನು ಇಸ್ಕೊಳ್ಳಿ. ಆದ್ರೆ ಮತ ಮಾತ್ರ ಬಿಜೆಪಿಗೆ ಹಾಕಿ. ಅವರ ಅಪ್ಪನ ಮನೆಯಿಂದ ಕೂಲಿ ಮಾಡಿ ಹಣ ತಂದಿಲ್ಲ ಅವರು ಅಂತಾ ಈಶ್ವರಪ್ಪ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಖಾದರ್, ಇದೊಂದು ರಾಂಗ್ ಸ್ಟೇಟ್ ಮೆಂಟ್. ಇದಕ್ಕೆ ನಗಬೇಕಾ, ರಿಯಾಕ್ಟ್ ಮಾಡಬೇಕೋ ಗೊತ್ತಾಗ್ತಿಲ್ಲ. ನಮ್ಮಲ್ಲಿ ಆ ರೀತಿ ಏನೂ ಇಲ್ಲ. ಯಡಿಯೂರಪ್ಪ ಸಿಎಂ ಆಗಿದ್ದಾಗ ಚಾಮರಾಜನಗರ ಜಿಲ್ಲೆಗೆ ಭೇಟಿ ಕೊಟ್ಟಿಲ್ಲ. ಇದೀಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಚಾಮರಾಜನಗರಕ್ಕೆ ತೆರಳಿ ಜನರನ್ನು ಮತ ಹಾಕುವಂತೆ ಬೇಡುತ್ತಿದ್ದಾರೆ ಅಂತಾ ಗರಂ ಆದ್ರು.