ಹೈದರಾಬಾದ್: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನ ನೀಡಬೇಕೆಂಬ ಬೇಡಿಕೆಗೆ ಕೇಂದ್ರ ಮಣಿಯದ ಹಿನ್ನೆಲೆಯಲ್ಲಿ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಎನ್ಡಿಎ ಒಕ್ಕೂಟದಿಂದ ಹೊರ ಬಂದಿದೆ.
ಎನ್ಡಿಎ ಒಕ್ಕೂಟದಿಂದ ಹೊರ ಬಂದಿರುವ ಟಿಡಿಪಿ ವೈಎಸ್ಆರ್ ಕಾಂಗ್ರೆಸ್ ಜೊತೆಗೂಡಿ ಅವಿಶ್ವಾಸ ಮಂಡನೆಗೆ ಮುಂದಾಗಿದೆ. ಮೋದಿ ಸರ್ಕಾರದ ವಿರುದ್ಧ ಸೋಮವಾರ ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ನೀಡುವಂತೆ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಗುರುವಾರ ಲೋಕಸಭೆಯಲ್ಲಿ ನೋಟಿಸ್ ನೀಡಿತ್ತು.
ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅವಕಾಶ ಪಡೆಯಲು ಲೋಕಸಭೆಯಲ್ಲಿ ಕನಿಷ್ಟ 50 ಸದಸ್ಯರ ಬೆಂಬಲ ಅಗತ್ಯವಿರುತ್ತದೆ. ಪ್ರಸ್ತುತ 536 ಸದಸ್ಯರು ಇರುವ ಲೋಕಸಭೆಯಲ್ಲಿ ಬಿಜೆಪಿ 274 ಸದಸ್ಯರ ಬಲವನ್ನು ಹೊಂದಿದೆ. ಲೋಕಸಭೆಯಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಸಂಖ್ಯೆಯನ್ನು ಹೊಂದಿರುವ ಕಾರಣ ಸರ್ಕಾರ ಬೀಳುವುದಿಲ್ಲ ಎನ್ನುವ ವಿಶ್ವಾಸದಲ್ಲಿ ಬಿಜೆಪಿ ಇದೆ.
2014 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 282 ಸ್ಥಾನಗಳಿಸಿತ್ತು. ಅಂತಿಮವಾಗಿ ಎನ್ಡಿಎ ಮಿತ್ರಕೂಟ 336 ಸ್ಥಾನಗಳನ್ನು ಪಡೆಯುವ ಮೂಲಕ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಈಗಿನ ಬಲಾಬಲ ಹೇಗಿದೆ?
ಟಿಡಿಪಿ ಹೊರಬಂದ ಹಿನ್ನೆಲೆಯಲ್ಲಿ ಎನ್ಡಿಎ ಬಲ ಈಗ ಕುಗ್ಗಿದೆ. 22 ಲೋಕಸಭಾ 6 ರಾಜ್ಯಸಭಾ ಸದಸ್ಯರು ಟಿಡಿಪಿಯಲ್ಲಿದ್ದಾರೆ. ಉಪ ಚುನಾವಣೆಯಲ್ಲಿ ಬಿಜೆಪಿ ಸೋತಿದ್ದ ಕಾರಣ ಈಗ ಲೋಕಸಭೆಯಲ್ಲಿ ಬಿಜೆಪಿ ಬಲ ಈಗ 282 ರಿಂದ 274 ಇಳಿಕೆಯಾಗಿದೆ. ಟಿಡಿಪಿ ಬೆಂಬಲ ವಾಪಸ್ ಪಡೆದ ಕಾರಣ ಎನ್ಡಿಎ ಸದಸ್ಯರ ಬಲ 331 ರಿಂದ 315ಕ್ಕೆ ಕುಸಿದಿದೆ. ರಾಜ್ಯಸಭೆಯಲ್ಲಿ 79 ಸದಸ್ಯರಿದ್ದ ಎನ್ಡಿಎ 73ಕ್ಕೆ ಕುಸಿದಿದೆ. ಇದನ್ನೂ ಓದಿ: ಎನ್ಡಿಎ ಮಿತ್ರಕೂಟದಲ್ಲಿ ಒಡಕು – ಮೋದಿಗೆ ಟಿಡಿಪಿ ನಾಯಕರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ