’ಸಂಸ್ಕಾರ ಭಾರತ’ (Sanskar Bharat) ಎನ್ನುವ ಚಿತ್ರದ ಮುಹೂರ್ತ ಸಮಾರಂಭವು ರಾಜಾಜಿನಗರದ ಗಣೇಶ ದೇವಸ್ಥಾನದಲ್ಲಿ ನಡೆಯಿತು. ಡಾ.ಟಿ.ಶಿವಕುಮಾರ್ ನಾಗರನವಿಲೆ, ಅಧ್ಯಕ್ಷರು, ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಇವರು ಮೊದಲ ದೃಶ್ಯಕ್ಕೆ ಕ್ಲಾಪ್ ಮಾಡಿ ತಂಡಕ್ಕೆ ಶುಭ ಹಾರೈಸಿದರು. ನಾಗೇಶ್.ಎನ್ (Nagesh) ಕಥೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವುದು ಎರಡನೇ ಅನುಭವ. ಡಾ.ವಿ.ನಾಗರಾಜ್ ಅವರು ಗ್ಲೋಬಲ್ ಮ್ಯಾನ್ ಪ್ರೊಡಕ್ಷನ್ಸ್ ಅಡಿಯಲ್ಲಿ ಬಂಡವಾಳ ಹೂಡುತ್ತಿದ್ದಾರೆ. ’ಅನಾಮಿಕ ಮತ್ತು ಇತರೆ ಕಥೆಗಳು’ ಎನ್ನುವ ಕಥಾಸಂಕಲನದಿಂದ ಆಯ್ದ ’ಅನಾಮಿಕ’ ಕಥೆಯು ಚಿತ್ರರೂಪದಲ್ಲಿ ಮೂಡಿಬರುತ್ತಿದೆ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?
ನಾಯಕ ಭಾರತೀಯ ಸಂಪ್ರದಾಯದವನು. ವೈಚಾರಿಕತೆ ಹಾಗೂ ಅದರ ಹಿಂದಿರುವ ವೈಜ್ಞಾನಿಕತೆಯ ಕುರಿತಾಗಿ ಸಂಶೋಧನೆ ನಡೆಸಲು ಅನಾಮಿಕ ಹೆಸರಿನಲ್ಲಿ ಲೇಖನ ಬರೆಯುತ್ತಿದ್ದ ಪಂಡಿತರೊಬ್ಬರನ್ನು ಅರಸಿ ರಾಜ್ಯದ ಕೆಲವು ಪ್ರದೇಶಗಳಲ್ಲಿ ಹುಡುಕಾಡುವಾಗ ಅವನಿಗೆ ಕಾಡುವ ಅನೇಕ ಜೀವಂತ ಸಮಸ್ಯೆಗಳು ಸನ್ನಿವೇಶಗಳ ರೂಪದಲ್ಲಿ ಎದುರಾಗುತ್ತದೆ. ಮುಂದೆ ಅದನ್ನು ಹೇಗೆ ಎದುರಿಸುತ್ತಾನೆ, ಅನಾಮಿಕನನ್ನು ಯಾವ ರೀತಿ ಕಂಡು ಹಿಡಿಯುತ್ತಾನೆ? ಆ ಮೂಲಕ ಸಂಶೋಧನೆ ನಡೆಸಿ ನಮ್ಮ ಸಂಸ್ಕ್ರತಿಯನ್ನು ಹೇಗೆ ಎತ್ತಿ ಹಿಡಿಯುತ್ತಾನೆ ಎಂಬುದು ಚಿತ್ರದ ಸಾರಾಂಶವಾಗಿದೆ. ದೃಶ್ಯಗಳು ಸಹಜತೆಗೆ ಹತ್ತಿರ ಇರುವಂತೆ ಸೆರೆಹಿಡಿಯಲಾಗುತ್ತಿದೆ.
ಸ್ವದೇಶವನ್ನು ಇಷ್ಟ ಪಡುವ ಹುಡುಗನಾಗಿ ಅಶೋಕ್ (Ashok) ನಾಯಕ. ಸದಾ ವಿದೇಶದ ಬಗ್ಗೆ ವ್ಯಾಮೋಹ ಹೊಂದಿರುವ ಹುಡುಗಿಯಾಗಿ ಅರ್ಚನಾ (Archana) ನಾಯಕಿ. ಮತ್ತೊಂದು ಮುಖ್ಯ ಪಾತ್ರದಲ್ಲಿ ಎಂ.ಡಿ.ಕೌಶಿಕ್ ಇವರೊಂದಿಗೆ ಎಂ.ಕೆ.ಮಠ, ಗಿರೀಶ್ಬೈಂದೂರು, ನಾಗರಾಜ್.ವಿ, ಪೂರ್ಣಿಮಾ, ರಾಧಿಕಾ, ಅನಿಲ್, ಹಮ್ಜಾ, ಬೇಬಿ ಫಾತಿಮಾ, ಮಾಸ್ಟರ್ ಫಹದ್ ನಟಿಸುತ್ತಿದ್ದಾರೆ. ಡಾ.ದೊಡ್ಡೆರಂಗೇಗೌಡ ಸಾಹಿತ್ಯದ ಗೀತೆಗಳಿಗೆ ರಾಜ್ಭಾಸ್ಕರ್ ಸಂಗೀತ ಸಂಯೋಜಿಸುತ್ತಿದ್ದಾರೆ. ಛಾಯಾಗ್ರಹಣ ಪಿ.ವಿ.ಆರ್.ಸ್ವಾಮಿ, ಸಂಕಲನ ನಾಗೇಶ್ ನಾರಾಯಣ್, ಪ್ರಸಾಧನ ಶಿವು ಚಿತ್ರಕ್ಕಿದೆ. ಕುಂದಾಪುರ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣವನ್ನು 25 ದಿನಗಳ ಕಾಲ ಮೂರು ಹಂತಗಳಲ್ಲಿ ನಡೆಸಲು ಯೋಜನೆ ರೂಪಿಸಲಾಗಿದೆ.