ಬೆಂಗಳೂರು: ಹೊಸ ವರ್ಷದ ದಿನ ರಾಜ್ಯದ ಮೇಲೆ ಅಲ್ಖೈದಾ ವಕ್ರದೃಷ್ಟಿ ಬೀರಿದೆ ಎನ್ನಲಾಗಿದೆ.
ಸಮುದ್ರ ಮಾರ್ಗದ ಮೂಲಕ ರಾಜ್ಯಕ್ಕೆ ನುಸುಳಲಿರುವ ಉಗ್ರರು ಬೆಂಗಳೂರು, ಮಂಗಳೂರು, ಮೈಸೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಕಳೆದ ವರ್ಷ ಹೊಸ ವರ್ಷಾಚರಣೆ ವೇಳೆ ಬೆಂಗಳೂರು ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗಿತ್ತು. ಇದರಿಂದ ಎಚ್ಚೆತ್ತಿರೋ ಪೊಲೀಸ್ ಇಲಾಖೆ ಈ ಬಾರಿ ಹೊಸ ವರ್ಷಾಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.
ನಗರದಾದ್ಯಂತ 15 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ನಿಯೋಜಿಸಲು ನಿರ್ಧರಿಸಿದೆ. ಹೊಸ ವರ್ಷದಂದು ರಾತ್ರಿ 2 ಗಂಟೆವರೆಗೆ ಪಬ್ ಮತ್ತು ಬಾರ್ ಗಳು ತೆರೆಯಲು ಅವಕಾಶ ನೀಡಲಾಗಿದೆ. ಕಬ್ಬನ್ ರೋಡ್, ಎಂಜಿ ರೋಡ್, ಬ್ರಿಗೇಡ್ ರೋಡ್ ಗಳ ಪ್ಯಾರಲಲ್ ರೋಡ್ ಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.
ಡಿಸೆಂಬರ್ 31ರ ರಾತ್ರಿ 9 ಗಂಟೆಯ ನಂತರ ನಗರದ ಪ್ರಮುಖ ಫ್ಲೈಓವರ್ ಗಳ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿದೆ.
2018ರ ಸ್ವಾಗತಕ್ಕೆ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. 4 ಅಡಿಷನಲ್ ಸಿಪಿ, ಇಬ್ಬರು ಜಂಟಿ ಪೊಲೀಸ್ ಆಯುಕ್ತರು, 19 ಡಿಸಿಪಿಗಳು, 49 ಎಎಸ್ಪಿಗಳು, 250 ಪೊಲೀಸ್ ಇನ್ಸ್ ಪೆಕ್ಟರ್, 400 ಎಸ್ವೈ, 700 ಎಎಸ್ಐ, 40 ಕೆಎಸ್ಆರ್ ಪಿ, 30 ಸಿಎಆರ್ ತುಕಡಿ, 1,500 ಸಾವಿರ ಹೋಂಗಾಡ್ರ್ಸ್, 1,000 ಸಿವಿಲ್ ಡಿಫೆನ್ಸ್ ಪೊಲೀಸರನ್ನ ನಿಯೋಜಿಸಲಿದ್ದಾರೆ.
ಒಟ್ಟು 800 ಸಿಸಿಟಿವಿಗಳನ್ನ ಅಳವಡಿಕೆ ಮಾಡಲಾಗುತ್ತದೆ. 500 ಹೊಯ್ಸಳ ವಾಹನ ಹಾಗೂ 250 ಬೈಕ್ ಗಳು ಗಸ್ತಿನಲ್ಲಿ ಇರಲಿವೆ.