ಮುಂಬೈ: ಮಾಜಿ ವಿಶ್ವ ಸುಂದರಿ, ಕರಾವಳಿ ಬೆಡಗಿ, ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ತಮ್ಮ ಸಿನಿಮಾಗಳಿಗಿಂತ ಬೇರೆ ಬೇರೆ ವಿಷಯಗಳಿಗೆ ಸುದ್ದಿಯಾಗುತ್ತಾರೆ. ಇತ್ತೀಚೆಗೆ ಅಭಿಷೇಕ್ ಜೊತೆ ಕರಣ್ ಜೋಹರ್ ಮನೆಗೆ ಹೋದಾಗ ಫೋಟೋಗ್ರಾಫ್ ಗಳಿಂದ ಪೇಚಿಗೆ ಸಿಲುಕಿಕೊಂಡಿದ್ದರು.
ಐಶ್ ಮಗಳು ಆರಾಧ್ಯಾಳ ಹುಟ್ಟುಹಬ್ಬದ ಬೆನ್ನಲ್ಲೇ ಐಶ್ವರ್ಯಾ ರೈ ತಮ್ಮ ತಂದೆ ಕೃಷ್ಣರಾಜ್ ರೈ ಅವರ ಹುಟ್ಟುಹಬ್ಬವನ್ನು ಕೂಡ ವಿಶಿಷ್ಟವಾಗಿ ಆಚರಿಸಿದ್ದರು. ತಂದೆಯ ಹುಟ್ಟುಹಬ್ಬದ ನಿಮಿತ್ತ ಸ್ಮೈಲ್ ಫೌಂಡೇಶನ್ ಜೊತೆಯಲ್ಲಿ 100 ಮಕ್ಕಳಿಗೆ ಉಚಿತ ಸೀಳು ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಲು ಐಶ್ವರ್ಯಾ ನಿರ್ಧರಿಸಿದ್ದರು. ಮಂಗಳವಾರ ಆ ಮಕ್ಕಳನ್ನು ಭೇಟಿ ಮಾಡಲು ಐಶ್ವರ್ಯಾ ರೈ, ಮಗಳು ಆರಾಧ್ಯಳ ಜೊತೆಗೆ ಆಸ್ಪತ್ರೆಗೆ ಬಂದಿದ್ದರು. ಕಾರ್ಯಕ್ರಮಕ್ಕೆ ಪತ್ರಕರ್ತರು ಹಾಜರಾಗಿದ್ದು, ಐಶ್ವರ್ಯಾಗೆ ಬೇಸರ ಮೂಡಿಸಿತ್ತು.
ಐಶ್ವರ್ಯ ರೈ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಅವರ ಮುಂದೆ ಒಂದೇ ಸಮನೇ ಫೋಟೋಗಳು ಕ್ಲಿಕ್ ಆಗ ತೊಡಗಿದವು. ಫೋಟೋಗ್ರಾಫರ್ ಗಳ ಫೋಟೋ ಕ್ಲಿಕ್ ಮಧ್ಯೆ ಸ್ವಲ್ಪ ಗದ್ದಲವು ಉಂಟಾಯಿತು. ಹೀಗಾಗಿ ಸ್ಥಳದಲ್ಲಿದ್ದ ಚಿಕ್ಕ ಮಕ್ಕಳು ಅಳಲಾರಂಭಿಸಿದವು. ತನ್ನಿಂದ ಬೇರೆಯವರಿಗೆ ತೊಂದರೆಯಾಗುತ್ತಿರುವುದನ್ನ ಗಮನಿಸಿದ ಐಶ್ವರ್ಯಾ ಫೋಟೋ ಕ್ಲಿಕ್ಕಿಸದಂತೆ, ಗಲಾಟೆ ಮಾಡದಂತೆ ಸೂಚಿಸಿದರು.
ಇದನ್ನೂ ಓದಿ: ನಟಿ ಐಶ್ವರ್ಯಾ ರೈಗೆ 44ರ ಸಂಭ್ರಮ- ಅಪ್ಪ, ಮಗಳಿಂದ ಸರ್ಪ್ರೈಸ್ ಪ್ಲಾನ್
ಆದರೂ ಕ್ಯಾಮರಾಗಳು ಮಾತ್ರ ಕ್ಲಿಕ್ ಆಗುತ್ತಿದ್ದವು. ಆಗ ಸಿಟ್ಟಿಗೆದ್ದ ಐಶ್, ಇದು ಪ್ರೀಮಿಯರ್ ಶೋ ಅಲ್ಲ, ಸಾರ್ವಜನಿಕ ಕಾರ್ಯಕ್ರಮವೂ ಅಲ್ಲ ಅಂದ್ರು. ಸ್ವಲ್ಪ ಸುಮ್ಮನಾಗಿ ಎಂದರೂ ಬಿಡದ ಕ್ಯಾಮೆರಾ ಫ್ಲ್ಯಾಶ್ ಕ್ಲಿಕ್ ಆಗುತ್ತಲೇ ಇತ್ತು. ಕೊನೆಗೆ ಐಶು ಭಾವುಕರಾಗಿ ಕಣ್ಣೀರು ಸುರಿಸಿದರು.