ಮಂಡ್ಯ: ಮಾಜಿ ಮುಖ್ಯಮಂತ್ರಿ ಹಾಗು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ರಾಜಕೀಯ ಜೀವನಾಧಾರಿತ ಚಿತ್ರ ನಿರ್ಮಾಣದ ಸುದ್ದಿಯ ನಂತ್ರ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕುರಿತ ಚಿತ್ರವೂ ಕೂಡ ನಿರ್ಮಾಣವಾಗಲಿದೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಎಚ್ಡಿಕೆ ಅವರ 20 ತಿಂಗಳ ಅಧಿಕಾರ ಕುರಿತು ಭೂಮಿಪುತ್ರ ಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ. ಆದ್ರೆ ಈ ಸಿನಿಮಾದಲ್ಲಿ ನೈಜತೆ ಇರುವುದಿಲ್ಲ. ನಾವೂ ಕೂಡ ಬಿಎಸ್ ಯಡಿಯೂರಪ್ಪ ಅವರ ರಾಜಕೀಯ ಜೀವನ ಕುರಿತ ಚಿತ್ರ ನಿರ್ಮಿಸುತ್ತೇವೆ. ಈಗಾಗಲೇ ಈ ಸಂಬಂಧ ನಮ್ಮ ಕಾರ್ಯಕರ್ತರು ಸಾಕಷ್ಟು ಒತ್ತಡ ಹಾಕುತ್ತಿದ್ದಾರೆ ಎಂದು ಮಾಜಿ ಸಂಸದೆ, ಬಿಜೆಪಿ ನಾಯಕಿ ತೇಜಸ್ವಿನಿ ಹೇಳಿದ್ದಾರೆ.
ಕಾರ್ಯಕರ್ತರು ಒಂದು ಲಕ್ಷ ರೂ. ನಂತೆ ಹಣ ಸಂಗ್ರಹಿಸಿ ಚಿತ್ರ ನಿರ್ಮಿಸೋಣ, ಆ ಚಿತ್ರದ ನಿರ್ದೇಶನವನ್ನು ನಾನೇ ಮಾಡ್ಬೇಕು ಅನ್ನೋ ಆಸೆಯನ್ನು ನಮ್ಮ ಕಾರ್ಯಕರ್ತರು ವ್ಯಕ್ತಪಡಿಸ್ತಿದ್ದಾರೆ. ಚಿತ್ರದಲ್ಲಿ 20 ತಿಂಗಳ ಅಧಿಕಾರವಧಿಯಲ್ಲಿ ಏನೆಲ್ಲಾ ಆಯಿತು ಅನ್ನೋದನ್ನ ತೋರಿಸ್ತಿವಿ. ನಿಜವಾದ ಭೂಮಿ ಪುತ್ರದ ಜನಕ ಯಡಿಯೂರಪ್ಪ. ನಮ್ಮ ಸಿನಿಮಾಕ್ಕೆ ‘ನೇಗಿಲಯೋಗಿ ಬಿಎಸ್ವೈ’ ಅಥವಾ ‘ಭೂಮಿಪುತ್ರನ ಜನಕ ಬಿಎಸ್ವೈ’ ಅಂತಾ ಹೆಸರಿಡ್ತೀವಿ ಎಂದು ತೇಜಿಸ್ವಿನಿ ತಿಳಿಸಿದರು.
ಇನ್ನು ಜಂತಕಲ್ ಪ್ರಕರಣದಲ್ಲಿ ಎಚ್ಡಿಕೆ ವಿಚಾರಣೆ ನಡೆಸಿರುವ ಸಂಬಂಧ ಪ್ರತಿಕ್ರಿಯಿಸಿದ ತೇಜಸ್ವಿನಿ, ಕುಮಾರಸ್ವಾಮಿ ಪ್ರಶ್ನಾತೀತರು ಅಲ್ಲ, ಪರಿಶುದ್ಧರೂ ಅಲ್ಲ. ತಮ್ಮ ಮೇಲೆ ಆರೋಪ ಬಂದಾಗ ರಾಜಕೀಯ ದುರುದ್ದೇಶ ಅನ್ನೋ ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಅವ್ರ ಮೇಲೆ ಆರೋಪ ಬಂದಾಗ ಯಾವ ರೀತಿ ಮಾತನಾಡಿದ್ರು. ಕುಮಾರಸ್ವಾಮಿ ಮುಗ್ಧ ರೈತರನ್ನ ನಂಬಿಸುವ ಕೆಲಸ ಮಾಡ್ತಿದ್ದಾರೆ. ಜಂತಕಲ್ ಪ್ರಕರಣದಲ್ಲಿ ತಪ್ಪು ಮಾಡಿದ್ರೆ ಕುಮಾರಸ್ವಾಮಿ ಅವ್ರಿಗೆ ಶಿಕ್ಷೆಯಾಗಲಿ, ನಿರ್ದೋಷಿಯಾಗಿದ್ರೆ ಅಗ್ನಿಪರೀಕ್ಷೆಯಿಂದ ಹೊರಬರಲಿ ಅಂದ್ರು.