ಚಿತ್ರದುರ್ಗ: ವೋಟಿನ ರಾಜಕೀಯ, ದೇವರ ರಾಜಕೀಯ ನಮಗೆ ಬೇಡ. ಹಳ್ಳಿಗಳಲ್ಲಿ ಹಲವು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸುವ ಕಾರ್ಯದಲ್ಲಿ ನಾವು ತೊಡಗಬೇಕಿದೆ ಎಂದು ಬಹುಭಾಷಾ ನಟ ಪ್ರಕಾಶ್ ರೈ ಹೇಳಿದ್ದಾರೆ.
ಜಿಲ್ಲೆಯ ಹಿರಿಯೂರು ತಾಲೂಕಿನ ಬಂಡ್ಲಾರಹಟ್ಟಿಯ ಗ್ರಾಮಕ್ಕೆ ದಿಡೀರ್ ಭೇಟಿ ನೀಡಿದ ಅವರು, ಗ್ರಾಮವನ್ನು ದತ್ತು ಪಡೆದು ಅಭಿವೃದ್ಧಿ ಪಡಿಸುವ ಬಯಕೆಯನ್ನು ವ್ಯಕ್ತಪಡಿಸಿದರು.
ಈ ವೇಳೆ ಗ್ರಾಮಸ್ಥರೊಂದಿಗೆ ಮಾತನಾಡಿ ಪ್ರಕಾಶ್ ರೈ, ಈ ಹಿಂದೆ ತೆಲಂಗಾಣದ ಕೊಂಡರೆಡ್ಡಿಪಲ್ಲಿ ಎಂಬ ಊರನ್ನು ದತ್ತು ಪಡೆದು ಮಾದರಿ ಗ್ರಾಮವನ್ನಾಗಿ ಮಾಡುವ ಪ್ರಯತ್ನದಲ್ಲಿದ್ದೇವೆ. ಇದೇ ರೀತಿ ಬಂಡ್ಲಾರಹಟ್ಟಿಯನ್ನು ಅಭಿವೃದ್ಧಿ ಪಡಿಸುವ ಇಚ್ಚೆ ಹೊಂದಿದ್ದೇನೆ ಎಂದರು.
ನನಗೆ ಒಂದು ತಿಂಗಳು ಸಮಯ ನೀಡಿದರೆ ಗ್ರಾಮದ ಅಭಿವೃದ್ಧಿಗೆ ಬೇಕಾದ ಮಾದರಿ ಯೋಜನೆಯನ್ನು ಸಿದ್ಧಪಡಿಸುತ್ತೇನೆ. ನಂತರ ದಿನಗಳಲ್ಲಿ ನಾನು ನನ್ನ ತಂಡ ಗ್ರಾಮಕ್ಕೆ ಬೇಕಾದ ಮೂಲಭೂತ ಸೌಲಭ್ಯಗಳು ನೀಡಿ ಮಾದರಿ ಗ್ರಾಮವನ್ನಾಗಿ ರೂಪಿಸು ಪ್ರಯತ್ನ ಮಾಡೋಣ ಎಂದರು. ಇದೇ ವೇಳೆ ಗ್ರಾಮ ಪ್ರತಿ ಕುಟುಂಬ ಸಹಕಾರ ಹೊಂದಿದ್ದಾರೆ ಮಾತ್ರ ನಮ್ಮ ಯೋಜನೆ ಯಶಸ್ವಿಯಾಗಲು ಸಾಧ್ಯವಿದ್ದು ಎಲ್ಲರು ಈ ಕುರಿತು ಯೋಚಿಸಬೇಕಿದೆ. ಗ್ರಾಮದ ಪ್ರತಿಯೊಬ್ಬ ಜನರ ಸಮಸ್ಯೆಗಳನ್ನು ಕೇಳುತ್ತೇನೆ ಎಂದು ಹೇಳಿದರು.