ಬೆಂಗಳೂರು: ಇದು ಒಳ್ಳೆಯದಲ್ಲ. ಮಾಧ್ಯಮಗಳ ಮೂಲಕ ದುಷ್ಕರ್ಮಿಗಳಿಗೆ ಸಂದೇಶ ರವಾನೆಯಾಗಬೇಕು. ಹಾಗಾಗಿ ನಾನೇ ಖುದ್ದು ದೂರು ನೀಡಲು ಬಂದಿದ್ದೇನೆ. ಇಲ್ಲಾಂದ್ರೆ ಬೆಂಗಳೂರು ಮುಂದೊಂದು ದಿನ ಮುಂಬೈ ಅಥವಾ ಡೆಲ್ಲಿ ಆಗುವುದರಲ್ಲಿ ಅನುಮಾನವಿಲ್ಲ ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಹಿರಿಯ ಪುತ್ರ ಗುರುರಾಜ್ಗೆ ದುಷ್ಕರ್ಮಿಗಳು ಚಾಕುವಿನಿಂದ ಇರಿದಿರುವ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ರಾಯರ ಆಶೀರ್ವಾದದಿಂದ ಹೆಚ್ಚಿನ ಅನಾಹುತವಾಗಿಲ್ಲ. ನಾವು ಯಾರಿಗೂ ಕೆಟ್ಟದನ್ನು ಮಾಡಿಲ್ಲ. ಹಾಗಾಗಿ ದೇವರು ನಮಗೆ ಕೆಟ್ಟದನ್ನು ಮಾಡುವುದಿಲ್ಲ ಎಂಬ ನಂಬಿಕೆ ಇದೆ. ಗಲಾಟೆ ನಡೆಯುವ ವೇಳೆ ಮಗು ಕಾರಿನಲ್ಲಿತ್ತು. ಹಾಗಾಗಿ ಮಗು ಸೇಫ್ ಆಗಿದೆ. ಅವನೂ ಯಾವಗಲೂ ಕ್ರೀಡಾಕೂಟದಲ್ಲಿ ಬ್ಯೂಸಿಯಾಗಿರುತ್ತಾನೆ. ಗುರು ಪತ್ನಿ ವಿಜ್ಞಾನಿ. ಆಕೆಯೂ ಸಹ ಬೇರೊಂದು ಕಡೆ ಕೆಲಸಕ್ಕೆ ಹೋಗುತ್ತಾರೆ. ಪ್ರತಿದಿನ ಗುರು ಮಗುವನ್ನು ಶಾಲೆಯಿಂದ ಕರೆದುಕೊಂಡು ಬರುತ್ತಾನೆ.
ಬಹಳ ಸೂಕ್ಷ್ಮವಾಗಿ ಸಮಾಜವನ್ನು ಗಮನಿಸಿರುತ್ತೇನೆ. ಸಾಧಿಸುವವರ ಮೇಲೆ ಹೊಟ್ಟೆ ಉರಿ, ಇದೊಂದು ದುರಂತ. ಅಂತಹವರಿಗೆ ಸೂಕ್ತ ಶಿಕ್ಷಣದ ಕೊರತೆಯಿದೆ ಎಂದು ಜಗ್ಗೇಶ್ ವಿಷಾದ ವ್ಯಕ್ತಪಡಿಸಿದರು.
ಆಗಿದ್ದೇನು?: ಗುರು ತಮ್ಮ ಮಗುವನ್ನು ಶಾಲೆಯಿಂದ ಕರೆದುಕೊಂಡು ಬರುವಾಗ ಕಾರಿನ ಪಕ್ಕವೇ ಕೆಲವರು ದೊಡ್ಡ ಶಬ್ಧ ಮಾಡಿಕೊಂಡು ಹೋಗಿದ್ದಾರೆ. ಗುರು ಇದನ್ನು ಪ್ರಶ್ನಿಸಿದಾಗ, ಇಬ್ಬರ ನಡುವೆಯೂ ಮಾತಿಗೆ ಮಾತು ಬೆಳೆದಿದೆ. ಕೊನೆಗೆ ದುಷ್ಕರ್ಮಿ ಗುರು ತೊಡೆಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ.
ಸಂಜೆ ವಾಕ್ ಮುಗಿಸಿಕೊಂಡು ಮನೆಗೆ ಬಂದಾಗ ಗುರುವಿನಿಂದ ಫೋನ್ ಬಂದಾಗ ನನಗೆ ವಿಷಯ ತಿಳಿಯಿತು. ನಂತರ ನಾನು ಆಸ್ಪತ್ರೆಗೆ ಬಂದು ಗುರುವನ್ನು ನೋಡಿದ್ದೇನೆ. ಕಾರ್ನಟಕ ಪೊಲೀಸರ ಬಗ್ಗೆ ನನಗೆ ನಂಬಿಕೆಯಿದೆ. ನಮ್ಮ ಪೊಲೀಸರು ತುಂಬಾ ಆ್ಯಕ್ಟೀವ್ ಆಗಿದ್ದಾರೆ. ಹಾಗಾಗಿ ನಾನು ದೂರು ದಾಖಲಿಸಿದ್ದೇನೆ. ಇದೊಂದು ಆಕಸ್ಮಿಕವಾಗಿ ನಡೆದಂತಹ ಘಟನೆಯಾಗಿದ್ದು, ಇದರ ಹಿಂದೆ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ ಎಂದು ಜಗ್ಗೇಶ್ ಸ್ಪಷ್ಟಪಡಿಸಿದರು.
ಘಟನೆ ಬಗ್ಗೆ ಹಲ್ಲೆಗೊಳಗಾದ ಗುರುರಾಜ್ ಪ್ರತಿಕ್ರಿಯಿಸಿದ್ದು, ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇವೆ. ಅವರು ಮುಂದಿನ ಕ್ರಮ ಕೈಗೊಳ್ತಾರೆ ಎಂದು ಹೇಳಿದ್ದಾರೆ.