ಬೆಂಗಳೂರು: ಇನ್ನೂ ಪೂರ್ತಿ ಹೀರೋ ಅನ್ನಿಸಿಕೊಳ್ಳದೇ ಇರೋ ಹುಡುಗರು ಏನೇನೋ ಮಾತಾಡಿ ವಿವಾದ ಸೃಷ್ಟಿಸಿಕೊಳ್ಳುತ್ತಿರುತ್ತಾರೆ. ಎರಡು ಮೂರು ಸಿನಿಮಾಗಳಲ್ಲಿ ನಾಯಕನಾಗಿ ಗುರುತಿಸಿಕೊಂಡಿರುವ ಚಂದನ್ ಎನ್ನುವ ನಟ ಏಕಾಏಕಿ ಕನ್ನಡ ಸಿನಿಮಾ ವಿಮರ್ಶಕರ ಕುರಿತಾಗಿ ಮಾತಾಡಿ ಇಲ್ಲದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಂತೆ ಕಾಣುತ್ತಿದೆ.
ಪ್ರೇಮ ಬರಹ ಸಿನಿಮಾಗೆ ವಿಮರ್ಶಕರಿಂದ ಉತ್ತಮ ಅಭಿಪ್ರಾಯ ಬಂದಿರಲಿಲ್ಲ. ಬಹುತೇಕ ಎಲ್ಲ ಪತ್ರಿಕೆಗಳು, ಆನ್ ಲೈನ್ ಮೀಡಿಯಾಗಳು ಈ ಸಿನಿಮಾಗೆ ಕಡಿಮೆ ಅಂಕ ನೀಡಿದ್ದವು. ಇದರಿಂದ ಸಿಕ್ಕಾಪಟ್ಟೆ ಬೇಸರಕ್ಕೊಳಗಾದ ಚಂದನ್, `ಕಾಸು ಕೇಳಿ ರಿವ್ಯೂ ಬರೆಯುವವರನ್ನು ನಂಬಬೇಡಿ. ಅವರು ನನ್ನ – ಗೆ ಸಮ’ ಎಂದು ಹೇಳಿ ಕೂದಲು ಕಿತ್ತುಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೋಡುವ ಜನರಿಗೆ ಚಂದನ್ ಅವರ ಮಾತು ತಪ್ಪು ಸಂದೇಶ ರವಾನಿಸುವಂತಿದೆ.
ಚಂದನ್ ಸದಾ ಒಂದಲ್ಲ ಒಂದು ವಿವಾದಗಳಿಗೆ ಆಹಾರವಾಗುತ್ತಲೇ ಇರುತ್ತಾರೆ. ಈ ಬಾರಿ ಏಕಾಏಕಿ ಮಾಧ್ಯಮದವರನ್ನೇ ಮೈಮೇಲೆಳೆದುಕೊಂಡಿದ್ದಾರೆ. ಇನ್ನೂ ಈಗಷ್ಟೇ ತಲೆಯೆತ್ತುತ್ತಿರುವ ನಟ ಚಂದನ್ ಹೀಗೆ ಪತ್ರಕರ್ತರ ವಿರುದ್ಧ ಮಾತಾಡಿರುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಮಾಧ್ಯಮ ವಲಯದಲ್ಲೂ ಹರಿದಾಡುತ್ತಿದೆ. ಅದೂ ಕೈ ಸನ್ನೆಯ ಮೂಲಕ ಕೆಟ್ಟದಾಗಿ ಮಾತಾಡಿರುವ ಚಂದನ್ ವಿರುದ್ಧ ಪತ್ರಕರ್ತರೆಲ್ಲಾ ಸಮರ ಸಾರಲಿದ್ದಾರಾ ಎನ್ನುವ ಅನುಮಾನ ಕೂಡಾ ಮೂಡುತ್ತಿದೆ.
ಇಷ್ಟೆಲ್ಲಾ ಆದರೂ ಚಿತ್ರದ ನಿರ್ದೇಶಕ ಕಂ ನಟ ಅರ್ಜುನ್ ಸರ್ಜಾ ಈ ಬಗ್ಗೆ ಏನೂ ಪ್ರತಿಕ್ರಿಯಿಸಿಲ್ಲ. ಹಾಗೆ ನೋಡಿದರೆ ಪಬ್ಲಿಕ್ ಟಿವಿ ವರದಿಗಾರರೊಂದಿಗೆ ಮಾತಾಡುತ್ತಾ ‘ನನಗೆ ಕೆಲವೊಂದು ವಿಚಾರ ಬೇಸರ ತರಿಸಿದೆ’ ಎಂದಷ್ಟೇ ಅರ್ಜುನ್ ಸರ್ಜಾ ಹೇಳಿದ್ದರು. ಆದರೆ ಅವರದ್ದೇ ಚಿತ್ರದ ನಾಯಕ ನಟ ತೀರಾ ಕೆಳದರ್ಜೆಯ ಮಾತಾಡಿರೋದು ನಿಜಕ್ಕೂ ಆಶ್ಚರ್ಯ ಹುಟ್ಟಿಸುತ್ತಿದೆ.