ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸುವ ಮೂಲಕ ಅಧಿಕಾರಿಗಳಿಗೆ ಶಾಕ್ ನೀಡಿದ್ದಾರೆ.
ಬೆಳಗಾವಿ, ಧಾರವಾಡ, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಯಲ್ಲಿ ಎಸಿಬಿ ದಾಳಿ ನಡೆದಿದೆ. ಬೆಳಗಾವಿಯ ಎಇಇ ಕಿರಣ್ ಸುಬ್ಬರಾವ್ ಮನೆ, ಕಚೇರಿ ಸೇರಿ 6 ಕಡೆ ದಾಳಿ ನಡೆದಿದೆ.
ತುಮಕೂರು ಉಪವಿಭಾಗಧಿಕಾರಿ ತಿಪ್ಪೇಸ್ವಾಮಿ ಮನೆ, ಚಿತ್ರದುರ್ಗದಲ್ಲಿ ಎರಡು ಮನೆ ಮತ್ತು ತುಮಕೂರಿನ ಮನೆ, ಕಚೇರಿ ಮೇಲೆ ಚಿತ್ರದುರ್ಗ ಎಸಿಬಿ ಡಿವೈಎಸ್ಪಿ ಜಿ.ಮಂಜುನಾಥ, ಶಿವಮೊಗ್ಗ ಡಿವೈಎಸ್ಪಿ ಚಂದ್ರಪ್ಪ ನೇತೃತ್ವದಲ್ಲಿ ದಾಳಿ ನಡೆದಿದ್ದು, ನಾಲ್ಕು ಕಡೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಚಿತ್ರದುರ್ಗ ತಾಲೂಕಿನ ಬೆಳಗಟ್ಟ ಗ್ರಾಮದ ನಿವಾಸ, ದೊಡ್ಡಸಿದ್ದವ್ವನಹಳ್ಳಿ ಗ್ರಾಮದಲ್ಲಿನ ತಿಪ್ಪೇಸ್ವಾಮಿ ಅವರ ಮಾವ ರಂಗಪ್ಪ ನಿವಾಸ ಹಾಗೂ ತುಮಕೂರಿನ ಶಿರಾ ರಸ್ತೆಯ ಎಸಿ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ.
ದಾವಣಗೆರೆಯಲ್ಲಿ ದುಡಾ ಜಾಂಯ್ಟ್ ಡೈರೆಕ್ಟರ್ ಮನೆ, ಕಚೇರಿ ಹಾಗೂ ಮಹಾನಗರ ಪಾಲಿಕೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದುಡಾ ಜಾಂಯ್ಟ್ ಡೈರೆಕ್ಟರ್ ಹಾಗೂ ಕಾರ್ಪೋರೇಷನ್ ಕಚೇರಿಯಲ್ಲಿ ಲೈಸೆನ್ಸ್ ವಿಭಾಗದ ಇಂಚಾರ್ಜ್ ಆಗಿರೋ ಗೋಪಾಲಕೃಷ್ಣ ಅವರ ಮೂರು ಅಂತಸ್ತಿನ ಮನೆ, 4 ನಿವೇಶನ, ಕೋಲ್ಕುಂಟೆ ಗ್ರಾಮದಲ್ಲಿ 8 ಎಕರೆ ಜಮೀನು ಒಂದು ಕಾರು ಪತ್ತೆಯಾಗಿದೆ. ಸದ್ಯ ಈ ಎಲ್ಲಾ ಮಹತ್ವದ ದಾಖಲೆ ಪತ್ರಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ. ಎಸಿಬಿ ಡಿವೈಎಸ್ಪಿ ವಾಸುದೇವರಾಮ ನೇತೃತ್ವದಲ್ಲಿ ಈ ದಾಳಿ ನಡೆದಿದೆ.
ಧಾರವಾಡದಲ್ಲಿ ಮೂಕಾಂಬಿಕಾ ನಗರದಲ್ಲಿರೋ ಕೆ.ಎಸ್.ಆರ್.ಟಿ.ಸಿ ಅಧಿಕಾರಿ ಶ್ರೀಪತಿ ದೊಡ್ಡಲಿಂಗಣ್ಣನವರ ಮನೆ ಮೇಲೆ ದಾಳಿ ನಡೆದಿದೆ. ರಸ್ತೆ ಸಾರಿಗೆ ನಿಗಮದಲ್ಲಿ ವಿಚಕ್ಷಣ ದಳದ ಅಧಿಕಾರಿಯಾಗಿರುವ ದೊಡ್ಡಲಿಂಗಣ್ಣನವರ ಹಾಗೂ ಬೆಳಗಾವಿ, ಧಾರವಾಡ, ಕಲಬುರಗಿ ಏಕಕಾಲಕ್ಕೆ ಮೂರು ಕಡೆ ಎಸಿಬಿ ದಾಳಿ ನಡೆದಿದೆ. ಧಾರವಾಡ ಎಸಿಬಿ ದಳದ ಡಿವೈಎಸ್ಪಿ ವಿಜಯಕುಮಾರ ಬಿಸಬಳ್ಳಿ ನೇತೃತ್ವದಲ್ಲಿ ದಾಳಿ ನಡೆದಿದ್ದು, ದಾಖಲೆಗಳನ್ನು ಪರಿಶೀಲಿಸಿದ್ದಾರೆ.