ಉಡುಪಿ: ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ಜಿಲ್ಲೆಯ ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ ಅಭಯಾರಣ್ಯದ ರೇಂಜರ್ ಶಿವರಾಂ ಆಚಾರಿ ಎಂಬವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಮಂಗಳೂರು ಹಾಗೂ ಉಡುಪಿಯ ಪೊಲೀಸರು ದಾಳಿಯಲ್ಲಿ ಭಾಗಿಯಾಗಿದ್ದಾರು. ಶಿವರಾಂ ಆಚಾರಿ ಅವರ ಕಂಬದ ಕೋಣೆಯಲ್ಲಿರೋ ಒಂದು ಮನೆ, ಆಜ್ರಿಯಲ್ಲೊಂದು ಮನೆ, ಕೊಲ್ಲೂರಿನಲ್ಲಿರುವ ಕ್ವಾಟ್ರಸ್, ಕಿರಿ ಮಂಜೆಶ್ವರ ಗ್ರಾಮದಲ್ಲಿರುವ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ.
ಎಸಿಬಿ ಎಸ್ಪಿ ಚೆನ್ನಬಸಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಶಿವರಾಂ ಆಚಾರ್ಯ ವಿರುದ್ಧ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಶಿವರಾಂ ಮಿತಿಗಿಂತ ಸಿಕ್ಕಾಪಟ್ಟೆ ಆಸ್ತಿ ಹೊಂದಿದ್ದು, ಸಾರ್ವಜನಿಕರಿಂದ ಲಂಚ ಸ್ವೀಕಾರ, ಅರಣ್ಯದಲ್ಲಿದ್ದ ಮರಗಳನ್ನು ಕಳ್ಳಸಾಗಣೆ ಮೂಲಕ ಮಾರಾಟ ಮಾಡಿ ಕಳ್ಳದಾರಿಯಲ್ಲಿ ಹಣ ಸಂಪಾದನೆ ಮಾಡಿದ್ದಾರೆ ಎಂಬ ಆರೋಪಗಳಿವೆ.
ಸದ್ಯ ಎಸಿಬಿ ಅಧಿಕಾರಿಗಳು ಶಿವರಾಂ ಅವರ ಮನೆಯಲ್ಲಿ ಕಡತಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಂಜೆ ವೇಳೆಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.