ಚಿಕ್ಕಮಗಳೂರು: ಆಂಜನೇಯ ಬೀದಿಯ ಫಾತಿಮಾಗೆ 2 ಲಕ್ಷದ 55 ಸಾವಿರ, ಮೀನಾಕ್ಷಿಗೆ 75 ಸಾವಿರ ದುಡ್ಡು, 100 ಗ್ರಾಂ ಚಿನ್ನ, ಕಲಾಳಿಗೆ 50 ಸಾವಿರ, ಹೇಮಾಳಿಗೆ ಒಂದುವರೆ ಲಕ್ಷ ಧರ್ಮಸ್ಥಳದ ಮಂಜುನಾಥನಿಗೆ 60 ಸಾವಿರ.. ಇದೇನಿದು, ಇವರೆಲ್ಲಾ ಯಾರು ಅಂತ ಗಾಬರಿಯಾಗ್ಬೇಡಿ. ಇವರೆಲ್ಲಾ ಚಿಕ್ಕಮಗಳೂರಿನ ಆಂಜನೇಯ ಬೀದಿ ಹಾಗೂ ವಲ್ಲಭಾ ಗಣಪತಿ ರಸ್ತೆ ನಿವಾಸಿಗಳು.
ತಮ್ಮ ಏರಿಯಾದಲ್ಲೇ ತಮ್ಮ ಮನೆ ಪಕ್ಕದಲ್ಲೇ ಹುಟ್ಟಿ ಬೆಳೆದವಳು ಎಂದು ರೇಣುಕಾ ಎಂಬಾಕೆಗೆ ಕೇಳಿದಂತೆಲ್ಲಾ ಒಬ್ಬರಿಗೆ ಗೊತ್ತಿಲ್ಲದೆ ಮತ್ತೊಬ್ಬರು ಎಂಬಂತೆ 20ಕ್ಕೂ ಹೆಚ್ಚು ಮಹಿಳೆಯರು 18 ಲಕ್ಷ ಹಣ ನೀಡಿದ್ದರು. ಹಣ ಕೊಟ್ಟವರಿಗೆಲ್ಲಾ ಚೆಕ್ ನೀಡಿದ್ದ ರೇಣುಕಾ ಇದೀಗ ರಾತ್ರೋರಾತ್ರಿ ಊರು ಬಿಟ್ಟಿದ್ದಾಳೆ. ಚೆಕ್ ಇಟ್ಕೊಂಡು ಮನೆ ಬಾಗಿಲಿಗೆ ಹೋದರೆ ಮನೆ ಬೀಗ ಹಾಕಿದೆ. ಅವರ ಅಪ್ಪ-ಅಮ್ಮನನ್ನ ಕೇಳಿದರೆ ನಮಗೆ ಗೊತ್ತಿಲ್ಲ ಎನ್ನುವ ಸಿದ್ಧ ಉತ್ತರ ನೀಡುತ್ತಿದ್ದಾರೆ. ಇದೀಗ ಮೋಸ ಹೋದವರು ಚೆಕ್, ದೂರು ಪ್ರತಿ ಇಟ್ಕೊಂಡು ಪೊಲೀಸ್ ಸ್ಟೇಷನ್, ಡಿಸಿ ಆಫೀಸ್, ಎಸ್ಪಿ ಆಫೀಸ್ ಗೆ ಅಲೆಯುತ್ತಿದ್ದಾರೆ.
ಜನರಿಗಷ್ಟೇ ಅಲ್ಲ ರೇಣುಕಾ ಧರ್ಮಸ್ಥಳ ಸಂಘದಿಂದಲೂ 60 ಸಾವಿರ ರೂ. ಎತ್ಕೊಂಡು ಓಡಿಹೋಗಿದ್ದಾಳೆ. ಅಂಗವಿಕಲನಾದ ಮಗನಿಗೆ ಹುಷಾರಿಲ್ಲ ಎಂದು ನಂಬಿಸಿ ಮನೆ ಕಟ್ಟೋದಕ್ಕೆ ಇಟ್ಟುಕೊಂಡಿದ್ದ ಹಣದಲ್ಲಿ 1 ಲಕ್ಷದ 75 ಸಾವಿರ ಹಣ ನೀಡಿದ್ದು, ಈಗ ಅನ್ನಂಗಿಲ್ಲ-ಅನುಭವಿಸುವಂತಿಲ್ಲ ಎನ್ನುವ ಹಾಗಾಗಿದೆ. ಕೆಲವರು ಬಡ್ಡಿಗೆ ಹಣ ಕೊಡಿಸಿ ಕೈ ಸುಟ್ಟುಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದರೆ ಕೇಸ್ ದಾಖಲಿಸಿಕೊಳ್ಳದೆ ದೂರು ಪಡೆದುಕೊಂಡು ಅವರನ್ನು ತೋರಿಸಿ, ಕರೆತರುತ್ತೀವಿ ಎಂದು ಹೇಳಿದ್ದಾರೆ.