ಧಾರವಾಡ: ಸಾಮಾನ್ಯವಾಗಿ ಡಾಕ್ಟರ್ ಅಂದರೆ ಇಂಜೆಕ್ಷನ್, ಔಷಧಿ ಕೊಟ್ಟು ರೋಗ ಗುಣಪಡಿಸುತ್ತಾರೆ. ಆದರೆ ಇವತ್ತಿನ ಧಾರವಾಡದ ನಮ್ಮ ಪಬ್ಲಿಕ್ ಹೀರೋ ಡಾಕ್ಟರ್ ವಿನೋದ್ ಕುಲಕರ್ಣಿ. ಅವರು ಹಾಡು ಮತ್ತು ಸಂಗೀತದ ಮೂಲಕ ರೋಗ ಗುಣಪಡಿಸುತ್ತಾರೆ.
ಮೂಲತಃ ವಿಜಯಪುರ ಜಿಲ್ಲೆಯವರಾದ ವಿನೋದ್ ಕುಲಕರ್ಣಿ ಅವರು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಮಾನಸಿಕ ತಜ್ಞರಾಗಿ ಹೆಸರು ಗಳಿಸಿರುವ ಇವರು ಕಿಮ್ಸ್ನಿಂದ ನಿವೃತ್ತರಾಗಿದ್ದು ಈಗ ವಿದ್ಯಾ ನಗರದ ಮಾನಸಾ ನರ್ಸಿಂಗ್ ಹೋಮ್ ನಡೆಸುತ್ತಿದ್ದಾರೆ. ಮಾನಸಿಕ ರೋಗಿಗಳು, ಮದ್ಯವ್ಯಸನ, ಮದುಮೇಹಕ್ಕೆ ಸಂಗೀತ ಥೆರಪಿ ಮೂಲಕ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ. ನರ್ಸಿಂಗ್ ಹೋಮ್ನಲ್ಲಿ ಇದಕ್ಕಾಗಿ ವಿಶೇಷ ಸೌಲಭ್ಯ ಮಾಡಲಾಗಿದೆ.
ಕುಲಕರ್ಣಿ ಅವರು ವೈದ್ಯವೃತ್ತಿ ಮತ್ತು ಸಂಗೀತದ ಜೊತೆಗೆ ಹಾಡುಗಾರರೂ ಆಗಿದ್ದಾರೆ. 150ಕ್ಕೂ ಹೆಚ್ಚು ಸಂಗೀತ ಕಛೇರಿಯನ್ನು ನಡೆಸಿದ್ದಾರೆ. ಯೋಗಪಟುವೂ ಆಗಿದ್ದು ಅತೀ ಹೆಚ್ಚು ಸಮಯದವರೆಗೂ ಶೀರ್ಷಾಸನ ಮಾಡಿ ಗಿನ್ನಿಸ್ ದಾಖಲೆ ಮಾಡಿದ್ದಾರೆ. ರೋಗಿಗಳಿಗೆ ಯೋಗವನ್ನೂ ಹೇಳಿಕೊಡುತ್ತಾರೆ. ಬಡ ರೋಗಿಗಳಿಗೆ ಉಚಿತವಾಗಿಯೂ ಚಿಕಿತ್ಸೆ ನೀಡೋ ಇವರನ್ನು ಉತ್ತರ ಕರ್ನಾಟಕದ ಮಂದಿ ದೇವರು ಎಂದು ಕರೆದು ಗೌರವಿಸುತ್ತಿದ್ದಾರೆ.