ಬೆಂಗಳೂರು: ಮುಂಬೈ ಮೂಲದ ಉದ್ಯಮಿ ದೇವ್ ಬ್ಯಾನರ್ಜಿ ಮೇಲೆ ಊಬರ್ ಕ್ಯಾಬ್ ನ ಚಾಲಕರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಜಾಗದಲ್ಲಿ ನಡೆದಿದೆ.
ಉದ್ಯಮಿ ದೇವ್ ಬ್ಯಾನರ್ಜಿ ತನ್ನ ಸ್ನೇಹಿತನ ಜೊತೆ ಕಳೆದ ರಾತ್ರಿ ಮುಂಬೈಯಿಂದ ಬೆಂಗಳೂರಿಗೆ ಬರಲು ಊಬರ್ ಕ್ಯಾಬ್ ಬುಕ್ ಮಾಡಿದರು. ಆದರೆ ಕ್ಯಾಬ್ ಚಾಲಕ ಸೀಟ್ ಬೆಲ್ಟ್ ಹಾಕಿರಲಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ ಕ್ಯಾಬ್ ಚಾಲಕ ಕೋಪಗೊಂಡಿದ್ದಾನೆ.
ಚಾಲಕ ವರ್ತನೆಯಿಂದ ಬೇಸತ್ತ ದೇವ್ ಹಾಗೂ ಅವರ ಸ್ನೇಹಿತ ಆ ಕ್ಯಾಬ್ ನಿರಾಕರಿಸಿ ಮತ್ತೊಂದು ಕ್ಯಾಬ್ ಹತ್ತಿದ್ದರು. ದೇವ್ ಕ್ಯಾಬ್ ನಿರಾಕರಿಸಿದಕ್ಕೆ ಊಬರ್ ಕ್ಯಾಬ್ ನ ಚಾಲಕ ಸಿಟ್ಟಿಗೆದ್ದಿದ್ದಾನೆ. ನಂತರ ಚಾಲಕನ ಜೊತೆಗೆ ಇತರ ಚಾಲಕರು ಸೇರಿ ಊಬರ್ ಕ್ಯಾಬ್ ಪಾರ್ಕಿಂಗ್ ರಸ್ತೆಯಲ್ಲಿ ದೇವ್ ಇದ್ದ ಕ್ಯಾಬ್ ನನ್ನು ಅಡ್ಡಗಟ್ಟಿದ್ದಾರೆ. ನಂತರ ಸುಮಾರು 30 ನಿಮಿಷಕ್ಕೂ ಹೆಚ್ಚು ಸಮಯ ದೇವ್ ಮೇಲೆ ಹಲ್ಲೆ ನಡೆಸಿದ್ದಾರೆ.
ಊಬರ್ ಚಾಲಕರ ಥಳಿತಕ್ಕೆ ಹೆದರಿದ ದೇವ್ ಪ್ರಜ್ಞೆ ತಪ್ಪಿದ ಹಾಗೆ ನಾಟಕ ಮಾಡಿದ್ದಾರೆ. ದೇವ್ ಪ್ರಜ್ಞೆ ತಪ್ಪಿದ್ದನ್ನು ನೋಡಿ ಊಬರ್ ಚಾಲಕರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಬಳಿಕ ಸ್ನೇಹಿತನ ಸಹಾಯದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ದೇವ್ ಇಂದಿರಾನಗರ ಠಾಣೆಯಲ್ಲಿ ದೂರು ಕೊಡಲು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಈ ಘಟನೆ ವಿಮಾನ ನಿಲ್ದಾಣದ ಆವರಣದಲ್ಲಿ ಆಗಿರುವ ಕಾರಣ ಏರ್ ಪೋರ್ಟ್ ಠಾಣೆಯಲ್ಲಿ ದೂರು ನೀಡುವಂತೆ ಸಲಹೆ ನೀಡಿದ್ದಾರೆ.